ಮನೀಶ್ ಸಿಸೋದಿಯ ದೆಹಲಿಯ ಉಪಮುಖ್ಯಮಂತ್ರಿ
ನವದೆಹಲಿ: ಎಎಪಿ ಪಕ್ಷದ ಹಿರಿಯ ನಾಯಕ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ನಿಕಟವರ್ತಿ ಮನೀಶ್ ಸಿಸೋದಿಯಾ ದೆಹಲಿಯ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ.
ಕೌಶಂಭಿಯ ಕೇಜ್ರಿವಾಲ್ ಅವರ ಸ್ವಗೃಹದಲ್ಲಿ ನಡೆದ ಆಪ್ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಲಿರುವ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಕಟ್ಟಲು ಸಹಕಾರಿಯಾಗುವಂತೆ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಎಪಿ ಪಕ್ಷ ದೆಹಲಿಯ ಎಲ್ಲ ೭ ಸ್ಥಾನಗಳನ್ನು ಕಳೆದುಕೊಂಡ ಮೇಲೆ, ಪಕ್ಷವನ್ನು ತಳಮಟ್ಟದಿಂದ ಮತ್ತೆ ಕಟ್ಟಿದ ಶ್ರೇಯಸ್ಸು ಸಿಸೋದಿಯಾ ಅವರಿಗೆ ಸಲ್ಲುತ್ತದೆ.
ಕಳೆದ ಎಎಪಿ ಪಕ್ಷದ ೪೯ ದಿನಗಳ ಅಧಿಕಾರದಲ್ಲಿ ಸಿದೋದಿಯಾ ಅವರು ಶಿಕ್ಷಣ, ಕಂದಾಯ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ನಿರ್ವಹಿಸಿದ್ದರು. ಕೇಜ್ರಿವಾಲ್ ಮತ್ತು ಸಿಸೋದಿಯಾ ಶನಿವಾರ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪತ್ಪರ್ಗಂಜ್ ಕ್ಷೇತ್ರದಿಂದ ಬಿಜೆಪಿ ಪಕ್ಷದ ವಿನೋದ್ ಕುಮಾರ್ ಬಿನ್ನಿ ಅವರನ್ನು ಸೋಲಿಸುವ ಮೂಲಕ ಸಿಸೋದಿಯಾ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸಿಸೋದಿಯಾ ಈ ಹಿಂದೆ ಧೀರ್ಘ ಕಾಲದವರೆಗೆ ಜೀ ನ್ಯೂಸ್ ಮತ್ತು ಆಲ್ ಇಂಡಿಯ ರೇಡಿಯೋದಲ್ಲಿ ಕಾರ್ಯನಿರ್ವಹಿಸಿದ್ದು, ಮಾಹಿತಿ ಹಕ್ಕು ಕಾಯ್ದೆಯ ಜಾರಿಗೆ ನಡೆದ ಚಳವಳಿಯಲ್ಲಿ ಭಾಗವಹಿಸಲು ತಮ್ಮ ಉದ್ಯೋಗ ತೊರೆದಿದ್ದರು. ಅಣ್ಣಾ ಹಜಾರೆ ಅವರ ಜನಲೋಕಪಾಲ ಚಳವಳಿಯ ಸಂಸ್ಥಾಪಕ ಸದಸ್ಯರಾಗಿದ್ದ ಅವರು ಅಣ್ಣಾ ಬಂಧಿತನಾಗಿ ಜೈಲಿಗೆ ತಳ್ಳಲ್ಪಟ್ಟಾಗ ಅವರ ಜೊತೆಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ