ಹಾಸನದಲ್ಲೂ ಕಾರ್ಯಾಚರಣೆ: ರಿಯಾಜ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಸಾದಿಕ್ ಪಾತ್ರ ಇರುವುದರಿಂದ ಆತನ ಬಂಧನಕ್ಕೆ ಶಿವಮೊಗ್ಗ, ಹಾಸನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಅಶೋಕ್ ಕುಮಾರ್, ಶಂಕರಗೌಡ ಮತ್ತು ಶ್ರೀನಿವಾಸಗೌಡ ಅವರನ್ನು ಗೌಪ್ಯ ಸ್ಥಳದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಹೇಳಿಕೆಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಅಲ್ಲದೇ, ಅವರು ನೀಡಿರುವ ಮಾಹಿತಿ ಆಧರಿಸಿ ಕೆಲವರನ್ನು ಎಸ್ಐಟಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ. ಇದರಲ್ಲಿ ಕೆಲವು ಪತ್ರಕರ್ತರು, ಸರ್ಕಾರಿ ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಪೊಲೀಸರಿಗೆ ಕೆಲವರು ಮಾಹಿತಿ ನೀಡಲು ಮುಂದಾಗುತ್ತಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.