ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಬಡವರ ವಿರೋಧಿಗಳು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಕಿಡಿ ಕಾರಿದ್ದಾರೆ.
ಸಾಹಿತಿ ಎಸ್.ಎಲ್. ಭೈರಪ್ಪ ಅವರು ಸರ್ಕಾರದ ಅನ್ನಭಾಗ್ಯ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೂಲಿನಾಲಿ ಮಾಡಿದವರಿಗೆ ಹಸಿವಿನಿಂದ ಅತ್ತವರಿಗೆ ಮಾತ್ರ ಅನ್ನದ ಮೌಲ್ಯ ಗೊತ್ತಾಗುತ್ತದೆ. ಹಸಿವಿನಿಂದ ಅಳುವ ಮಕ್ಕಳನ್ನು ನೋಡಿಯಾದರೂ ಅವರು ಅನ್ನದ ಬೆಲೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದರು. ಅವರ ಎದೆಯ ಗೂಡಿನ ಎಲುಬು ಕಾಣುತ್ತಿತ್ತು.
ಈ ಹಿನ್ನೆಲೆಯಲ್ಲಿ ಅವರನ್ನು ಬಲಪಡಿಸಲು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಭೈರಪ್ಪನವರು ಹಸಿದ ಮಕ್ಕಳ ಅಳುವು ಕೇಳಿಸಿಕೊಂಡಿದ್ದರೆ ಈ ರೀತಿ ಹೇಳಿಕೆ ಕೊಡುತ್ತಿರಲಿಲ್ಲ. ನಮ್ಮ ಸರ್ಕಾರ ಬಡವರ ಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಇನ್ನಷ್ಟು ಯೋಜನೆಗಳನ್ನು ಹುಡುಕಿ ಹುಡುಕಿ ಜಾರಿಗೊಳಿಸುತ್ತೇವೆ ಎಂದರು ಆಂಜನೇಯ.
Advertisement