
ಬೆಂಗಳೂರು: ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ 'ಆತ್ಮಹತ್ಯೆ ಮಾಡಿಕೊಂಡಿದ್ದಾರೆ'. ಅವರ ಸಾವಿನ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಎಐಐಎಂಎಸ್) ತಜ್ಞರ ಸಮಿತಿ ಸಿಬಿಐಗೆ ವರದಿ ನೀಡಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಆದರೆ, ನನ್ನ ಬಳಿ ಯಾವುದೇ ವರದಿ ಇಲ್ಲ. ವರದಿ ಬಂದ ಮೇಲಷ್ಟೇ ಪ್ರತಿಕ್ರಿಯೆ ನೀಡುವೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬಿಐ ತನಿಖೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಮಾಹಿತಿ ಕೇಳಲು ಸಾಧ್ಯವಿಲ್ಲ. ಅಧಿಕೃತ ವರದಿ ಸಲ್ಲಿಕೆಯಾದ ಬಳಿಕವಷ್ಟೆ ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿ ಏನಿತ್ತು?: ರವಿ ಅವರ ಸಾವಿನ ತನಿಖೆ ನಡೆಸುತ್ತಿರುವ ಸಿಐಐ ಅಧಿಕಾರಿಗಳು ರವಿ ಸಾವಿನ ಬಗ್ಗೆ ತಿಳಿದುಕೊಳ್ಳಲು ಎಐಐಎಂಎಸ್ ತಜ್ಞರ ಸಮಿತಿ ರಚಿಸಿ ಮಾಹಿತಿ ಕೋರಿದ್ದರು. ಈ ಮಾಹಿತಿಯನ್ನು ಸಮಿತಿ ನೀಡಿದ್ದು 'ಇದು ಆತ್ಮಹತ್ಯೆ ಪ್ರಕರಣ' ಎಂದು ವರದಿ ನೀಡಿದ್ದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸಾವಿನ ಸಂದರ್ಭದ ಘಟನಾವಳಿಗಳ ಬಗ್ಗೆ ಸಿಬಿಐ ಅಧಿಕಾರಿಗಳು ನೀಡಿದ ಮಾಹಿತಿ ಹಾಗೂ ನಗರದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಶವಪರೀಕ್ಷೆ ವರದಿಯನ್ನು ಅಧ್ಯಯನ ನಡೆಸಿ ಸಮಿತಿ ತನ್ನ ಅಭಿಪ್ರಾಯ ತಿಳಿಸಿದೆ. ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಕೂಡಾ ಸಮಿತಿ ಹೋಲಿಕೆ ಮಾಡಿದೆ. 'ನೇಣು ಬಿಗಿದುಕೊಂಡಿದ್ದರಿಂದ ಉಸಿರುಗಟ್ಟಿ' ಸಾವು ಸಂಭವಿಸಿದೆ ಎಂದು ಶವಪರೀಕ್ಷೆಯ ವರದಿ ಉಲ್ಲೇಖಿಸಿ ರವಿ ಅವರದ್ದು ಆತ್ಮಹತ್ಯೆ ಪ್ರಕರಣವೆಂದು ಎಐಐಎಂಎಸ್ ತಜ್ಞರ ಸಮಿತಿ ಲಿಖಿತ ರೂಪದಲ್ಲಿ ವರದಿಯನ್ನು ಸಿಬಿಐಗೆ ಸಲ್ಲಿಸಿರುವುದಾಗಿ ಪತ್ರಿಕೆ ವರದಿಯಲ್ಲಿ ಉಲ್ಲೇಖವಾಗಿದೆ.
ತೀವ್ರ ಚರ್ಚೆ ಹಾಗೂ ರಾಜಕೀಯ ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ತಮ್ಮದೇ ಲ್ಯಾಬ್ ಸೆಂಟ್ರಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬ್ (ಸಿಎಫ್ಎಸ್ಎಲ್) ಅಂತಿಮ ವರದಿ ಬಂದ ಬಳಿಕ ತನಿಖೆಗೆ ತಾರ್ಕಿಕ ಅಂತ್ಯ ಹಾಡಲು ಸಿಬಿಐ ಕಾಯುತ್ತಿದೆ. ಅಂತಿಮ ವರದಿ ನೀಡುವ ಮುನ್ನ ರಾಜ್ಯದ ಇನ್ನಷ್ಟು ಜನರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಜುಲೈನಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ. ಡಿ.ಕೆ ರವಿ ಸಾವು ಸಂಭವಿಸಿದಾಗ ಭೂಮಾಫಿಯಾ, ವೃತ್ತಿ ವೈಷಮ್ಯ ಸೇರಿದಂತೆ ವಿವಿಧ ಕಾರಣ ಎಂದು ಸುದ್ದಿ ಹಬ್ಬಿತ್ತು. ಆದರೆ, ಅಂತಹ ಯಾವುದೇ ಪಿತೂರಿ ಇರುವುದು ಕಂಡು ಬಂದಿಲ್ಲ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ. ರವಿ ಅವರು ರಾಜ್ಯದ ಪ್ರಮುಖ ವ್ಯಕ್ತಿಗಳೊಂದಿಗೆ ಮೊಬೈಲ್ ಫೋನ್ನಲ್ಲಿ ಸಂಪರ್ಕದಲ್ಲಿದ್ದರು ಎನ್ನುವ ಫೋನ್ ಕರೆಗಳ ಪರಿಶೀಲನೆ ವೇಳೆ ತಿಳಿದು ಬಂದಿದೆ.
Advertisement