ಮೋದಿಗೆ ಮೂರ್ತಿ ಪ್ರಶಂಸೆ; ಪ್ರಧಾನಿ ಕಾರ್ಯಕ್ರಮಗಳಿಗೆ ಜನರಿಂದ ಸಹಕಾರ ಕೋರಿಕೆ
ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಧೀಮಂತ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಬಿಚ್ಚು ಪ್ರಶಂಸೆ ವ್ಯಕ್ತಪಡಿಸಿದ್ದು ಒಂದು ವರ್ಷದಲ್ಲಿ ಬಹಳಷ್ಟು ಕೆಲಸಗಳಾಗಿದೆ ಹಾಗು ಪ್ರಧಾನಿ ಅವರ ಮುಂದಿನ ಸಾಹಸಗಳಿಗೆ ಜನರು ಸಹಕಾರ ನೀಡಬೇಕು ಎಂದಿದ್ದಾರೆ.
"ಬಹಳ ಉತ್ಸಾಹಭರಿತ ಹಾಗು ಕಷ್ಟ ಬೀಳುವ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಜನ, ಎಲ್ಲ ಪಕ್ಷಗಳು ಮತ್ತು ವಿಪಕ್ಷಗಳು ಅವರನ್ನು ಹಿಂಬಾಲಿಸಬೇಕು. ಬಹಳಷ್ಟು ಒಳ್ಳೆಯ ಕೆಲಸಗಳಾಗಿವೆ ಎಂದೆನಿಸುತ್ತದೆ ನನಗೆ. ಆದರೆ ಇದಿನ್ನೂ ಆರಂಭದ ಕಾಲ. ಆದುದರಿಂದ ನಾವೆಲ್ಲರೂ ಪ್ರಧಾನಿಯವರನ್ನು ಬೆಂಬಲಿಸಿ ದಕ್ಷತೆಯಿಂದ ನಮ್ಮ ಕೆಲಸ ಮುಂದುವರೆಸಬೇಕು. ಆಗ ಪ್ರಗತಿಯನ್ನು ಕಾಣಬಲ್ಲೆವು" ಎಂದು ಮೂರ್ತಿ ಹೇಳಿದ್ದಾರೆ.
ಪಾರದರ್ಶಕ ತೆರಿಗೆಗಳಿಗೆ ಕರೆಕೊಟ್ಟ ಮೂರ್ತಿ ತೆರಿಗೆ ನೀತಿಗಳು ಪಾರದರ್ಶಕತೆ, ಸ್ಥಿರತೆಯಿಂದ ಕೂಡಿ ಸುಲಭವಾಗಿ ಸಂವಹನ ಮಾಡುವಂತೆ ಹಾಗು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು. ಆಗ ಸರ್ಕಾರದ ಮೇಲೆ ಜನಕ್ಕೆ ನಂಬಿಕೆ ಬೆಳೆದು ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.
ಸಿಸಿಐ ನಲ್ಲಿ ನೀಡಿದ ಉಪನ್ಯಾಸದ ವೇಳೆ ಮಾತನಾಡಿದ ಅವರು ಸರಿಯಾದ ಭೂ ಹಂಚಿಕೆಯಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದಿದ್ದಾರೆ. ಹಾಗು ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳು ನಿರ್ವಹಿಸಬೇಕು ಎಂದಿದ್ದಾರೆ.
ಸಂಸ್ಥೆಗಳ ಮಧ್ಯೆ ಸ್ಪರ್ಧಾತ್ಮಕ ಪರಿಸರ ಇರಬೇಕು ಎಂದಿರುವ ಆವರು ಸ್ಪರ್ಧೆಯಿಂದ ಸಂಸ್ಥೆಗಳಲ್ಲಿ ಹೊಸ ಹೊಳಹುಗಳು, ಒಳ್ಳೆಯ ಸೇವೆ, ಒಳ್ಳೆಯ ಉತ್ಪನ್ನಗಳು ಮತ್ತು ಸಂಶೋಧನೆ ಹೊರಬರುತ್ತದೆ ಎಂದಿದ್ದಾರೆ.