ಶಿಕ್ಷಕರ ನೇಮಕ: ತಜ್ಞರ ಅಭಿಪ್ರಾಯ ಪಡೆದು ೧೫ ದಿನಗಳಲ್ಲಿ ಅಂತಿಮ ಪಟ್ಟಿ
ಬೆಂಗಳೂರು: ರಾಜ್ಯ ಸರ್ಕಾರ ಹೊಸದಾಗಿ ನೇಮಿಸಿಕೊಳ್ಳಲು ಸಿದ್ಧತೆ ನಡೆಸಿದ್ದ ೯,೭೦೦ ಸಾವಿರ ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ತಡೆ ನೀಡಿದ್ದು, ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದು ೧೫ ದಿನಗಳೊಳಗೆ ಅಂತಿಮ ಪಟ್ಟಿ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಇಟಿಯಲ್ಲಿ ಅರ್ಹತೆ ಹೊಂದಿ ಸಿಇಟಿ ಪಾಸು ಮಾಡಿ ದಾಖಲಾತಿ ಪರಿಶೀಲನೆ ಮುಗಿಸಿರುವ ಅಭ್ಯರ್ಥಿಗಳ ಪೈಕಿ ೧ ರಿಂದ ೫ನೇ ತರಗತಿ ಶಿಕ್ಷಕರ ನೇಮಕಾತಿಗೆ ಯಾವುದೇ ಸಮಸ್ಯೆ ಇರಲಿಲ್ಲ. ೬ ರಿಂದ ೮ನೇ ತರಗತಿ ಶಿಕ್ಷಕರಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಮುಗಿಸಿದವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬೇಕೆಂಬ ಕಾನೂನಿಗೆ ತಿದ್ದುಪಡಿ ತಂದು ಒಂದು ವರ್ಷದ ಇಂಗ್ಲಿಷ್ ಡಿಪ್ಲೊಮಾ ಮುಗಿಸಿದವರಿಗೆ ಅವಕಾಶ ನೀಡಲಾಗಿತ್ತು. ಇದರ ವಿರುದ್ಧ ಒಂದು ವರ್ಗ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ನೇಮಕಾತಿಗೆ ತಡೆ ನೀಡಲಾಗಿದೆ.
ಉಳಿದಂತೆ ೧ ರಿಂದ ೫ನೇ ತರಗತಿ ಹಾಗೂ ೮ ರಿಂದ ೧೦ ನೇ ತರಗತಿ ಶಿಕ್ಷಕರ ನೇಮಕಾತಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಪಪಡಿಸಿದರು. ಕೇವಲ ಇಂಗ್ಲಿಷ್ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಾತ್ರ ತಡೆ ನೀಡುವ ಬದಲು ಇಡೀ ನೇಮಕಾತಿ ಪ್ರಕ್ರಿಯೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶಿಸಿರುವುದರ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ. ಒಂದು ವೇಳೆ ತೀರ್ಪಿಗೆ ಬದ್ಧವಾದ ಅಭಿಪ್ರಾಯ ಬಂದಲ್ಲಿ ಇಂಗ್ಲಿಷ್ ಶಿಕ್ಷಕರ ನೇಮಕಾತಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಶಿಕ್ಷಕರ ನೇಮಕಾತಿಗೆ ಹಳೆ ನಿಯಮದಂತೆ ಚಾಲನೆ ನೀಡಲಾಗುವುದು ಎಂದರು.