
ವಿಧಾನ ಪರಿಷತ್: ನ್ಯಾಯಾಧೀಕರಣದ ಹೊರತಾಗಿ ಕಳಸಾಬಂಡೂರಿ ವಿಚಾರದಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಆಶಯಕ್ಕೆ ಮತ್ತೆ ಜೀವ ಬಂದಿದೆ.
ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮತ್ತು ಅಲ್ಲಿನ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸೋಣ ಎಂಬ ಬಿಜೆಪಿಯ ಸಲಹೆಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಈ ನಿಟ್ಟಿನಲ್ಲಿ ಮುಂದಿನ ಹೊಣೆಗಾರಿಕೆಯನ್ನು ಪ್ರತಿಪಕ್ಷ ಬಿಜೆಪಿಯ ಹೆಗಲಿಗೆವಹಿಸಿದೆ. ಗೋವಾ ಮತ್ತು ಮಹಾರಾಷ್ಟ್ರ ಮುಖ್ಯ-ಮಂತ್ರಿಯವರೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ಅವರಿಂದ ಸೂಕ್ತ ಸ್ಪಂದನೆ ಸಿಗದೇ ಅಪಮಾನವಾಗಬಾರದು. ಹೀಗಾಗಿ ನಮ್ಮ ಪ್ರತಿಪಕ್ಷ ನಾಯಕರು ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಸೂಕ್ತ ಅವಕಾಶ ಕಲ್ಪಿಸಲಿ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಇದಕ್ಕೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರೊಂದಿಗೆ ಈ ಬಗ್ಗೆ ಚರ್ಚಿಸಿ ಮಾತುಕತೆಗೆ ಅವಕಾಶ ಕಲ್ಪಿಸಿಕೊಳ್ಳೋಣ ಎಂದು ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಮಹಾಂತೇಶ ಕೌಜಲಗಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲು ಅಭ್ಯಂತರವೇನಿಲ್ಲ, ಅಲ್ಲಿನ ವಿರೋಧ ಪಕ್ಷದವರಿಗೂ ಮನವರಿಕೆ ಮಾಡಿಕೊಡೋಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಸಭೆಗೆ ತಿಳಿಸಿದರಲ್ಲದೇ, ಸಭೆ ಕರೆಯಲು ಸೂಕ್ತ ಏರ್ಪಾಡು ಮಾಡುವುದು ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪನವರ ಜವಾಬ್ದಾರಿ ಎಂದರು.
ಸಚಿವರು, ಎರಡೂ ಮನೆ. ಸಭಾ ನಾಯಕರು, ಸಂಸದರು ಮತ್ತು ಪ್ರತಿಪಕ್ಷ ನಾಯಕರು, ಪ್ರಮುಖ ನಾಯಕರೆಲ್ಲಾ ಸೇರಿ ನಿಯೋಗ ಹೋಗೋಣ ಎಂದು ಸಚಿವರು ಹೇಳುತ್ತಿದ್ದಂತೆ, ಸರ್ಕಾರ ನಿಲುವನ್ನು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅಭಿನಂದಿಸಿದರು.
Advertisement