ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಪದಚ್ಯುತಿ ನಿರ್ಣಯ ಕೈ ಬಿಡದೇ ಹೋದರೆ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಡಿಸೆಂಬರ್ 1ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪರಿಷತ್ ಸಂಚಾಲಕ ಆದರ್ಶ್ ಐಯ್ಯರ್ ಮಾತನಾಡಿ ಲೋಕಾ ಸಂಸ್ಥೆ ನ್ಯಾ. ಭಾಸ್ಕರ್ ರಾವ್ ಪುತ್ರ ಸೇರಿದಂತೆ 10ಕ್ಕಿಂತ ಹೆಚ್ಚು ಆರೋಪಿಗಳು ಜೈಲು ಸೇರಿದರೂ ಲೋಕಾಯುಕ್ತರ ಪದಚ್ಯುತಿಗೆ ನಿರ್ಣಯ ಮಂಡಿಸಲು 5 ತಿಂಗಳ ಕಾಲಾವಕಾಶ ಪಡೆದುಕೊಂಡಿತ್ತು. ಆದರೆ ಇದೇ ಸರ್ಕಾರ ಉಪಲೋಕಾಯುಕ್ತ ಸುಭಾಷ್ ಪದಚ್ಯುತಿಗೆ ಕಾಂಗ್ರೆಸ್ ಶಾಸಕರು ತರಾತುರಿಯಲ್ಲಿ ಸಹಿಹಾಕುವ ಮೂಲಕ ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನ್ಯಾ.ಭಾಸ್ಕರ್ ರಾವ್ ಪದಚ್ಯುತಿಗೆ ಪ್ರಸ್ತಾವ ಮಂಡಿಸಿದಾಗ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಧಕ್ಕೆಯಾಗದಂತೆ ಸಭಾಧ್ಯಕ್ಷರ ತೀರ್ಮಾನ ಕೈಗೊಂಡರು. ಆದರೆ ನ್ಯಾ. ಸುಭಾಷ್ ಅಡಿ ಪದಚ್ಯುತಿ ವಿಷಯದಲ್ಲಿ ಬದ್ಧತೆ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಜನಾಧಿಕಾರ ಸಂಘರ್ಷ ಪರಿಷತ್ ಸಂಚಾಲಕರಾದ ಪ್ರಕಾಶ್ ಮಾತನಾಡಿ, ಉಪಲೋಕಾಯುಕ್ತರನ್ನು ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ. ರಾಜ್ಯ ಪಾಲರು ತಿರಸ್ಕರಿಸಿದ್ದ ಹೆಸರನ್ನೇ ಪದೇ ಪದೇ ಕಳುಹಿಸುತ್ತಿದೆ. ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಗೆ ಯೋಗ್ಯರಾದ ಉಚ್ಚ ನ್ಯಾಯಾಲದ ನಿವೃತ್ತ ನ್ಯಾಯಮೂರ್ತಿಗಳು ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ದೇಶದಲ್ಲೇ ಶಕ್ತಿಶಾಲಿಯಾಗಿರುವ ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಲು ರಾಜ್ಯ ಸರ್ಕಾರ ಪಿತೂರಿ ನಡೆಸಿದೆ. ಉಪಲೋಕಾಯುಕ್ತರ ಪದಚ್ಯುತಿಗೆ ಮುಂದಾಗಿರುವುದು ಅವಿವೇಕದ ಹೆಜ್ಜೆಯಾಗಿದೆ.
2000ರಿಂದ 2015ರ ವರೆಗಿನ 596 ಪ್ರಕರಣಗಳಲ್ಲಿ ಭಾಗಿಯಾಗಿರುವ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಲೋಕಾಯುಕ್ತ ಸಂಸ್ಥೆ ಶಿಫಾರಸ್ಸು ಮಾಡಿದೆ. ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
Advertisement