ಮತ್ತೆ ನ್ಯಾಯಾಲಯಕ್ಕೆ ಶ್ರೀ ಗೈರು; ವಕೀಲರಿಂದ ಸ್ಪಷ್ಟನೆ

ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ರಾಘವೇಶ್ವರ ಶ್ರೀಗಳಿಗೆ ಖುದ್ದಾಗಿ ಹಾಜರಾಗುವಂತೆ ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದರೂ ವೈಯುಕ್ತಿಕ ಕಾರಣ ನೀಡಿರುವ ಶ್ರೀಗಳು ವಿಚಾರಣೆಗೆ ಮತ್ತೆ ಗೈರಾಗಿದ್ದಾರೆ....
ರಾಘವೇಶ್ವರ ಶ್ರೀ ಪ್ರಕರಣ (ಸಂಗ್ರಹ ಚಿತ್ರ)
ರಾಘವೇಶ್ವರ ಶ್ರೀ ಪ್ರಕರಣ (ಸಂಗ್ರಹ ಚಿತ್ರ)

ಬೆಂಗಳೂರು: ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆದಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಖುದ್ದಾಗಿ ಹಾಜರಾಗುವಂತೆ ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದರೂ ವೈಯುಕ್ತಿಕ ಕಾರಣ ನೀಡಿರುವ ಶ್ರೀಗಳು ವಿಚಾರಣೆಗೆ ಮತ್ತೆ ಗೈರಾಗಿದ್ದಾರೆ. ಅಲ್ಲದೆ ಅವರ ಪರ ವಾದ ಮಂಡಿಸಲು ಅವರ ವಕೀಲರನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

ರಾಘವೇಶ್ವರ ಶ್ರೀಗಳ ಪರವಾಗಿ ಹಾಜರಾದ ವಕೀಲ ಮನಮೋಹನ್ ಅವರು, ಶ್ರೀಗಳು ವೈಯುಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ರಾಘವೇಶ್ವರ ಶ್ರೀಗಳ ಪರವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 16ಕ್ಕೆ ಮುಂದೂಡಿತು.

ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿ ಶ್ರೀಗಳಿಗೆ ಸೆ.30ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ರಾಘವೇಶ್ವರ ಶ್ರೀಗಳು ಈಗಾಗಲೇ ಡಿಎನ್‍ಎ ಪರೀಕ್ಷೆಗೆ ಹಾಜರಾಗಿದ್ದೇನೆ ಉಳಿದ ಮೂರು ಪರೀಕ್ಷೆಗಳು ಅಗತ್ಯವಿಲ್ಲ ಎಂದು ಪತ್ರ ಬರೆದು ವೈದ್ಯಕೀಯ ಪರೀಕ್ಷೆಗೆ ಹಾಜರಾಗಿರಲಿಲ್ಲ. ಆದ್ದರಿಂದ ಅವರ ಜಾಮೀನನ್ನು ರದ್ದುಗೊಳಿಸಬೇಕು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೈಗೆತ್ತಿಕೊಂಡ 51ನೇ ಸೆಷನ್ಸ್ ನ್ಯಾಯಾಲಯ, ರಾಘವೇಶ್ವರ ಶ್ರೀಗಳಿಗೆ ನಿನ್ನೆ ಸಮನ್ಸ್ ಜಾರಿಗೊಳಿಸಿತ್ತು.

ಎರಡು ಪ್ರಕರಣರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ಮತ್ತು ಯಕ್ಷಗಾನ ಕಲಾವಿದೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳು ಜಾಮೀನು ಪಡೆದಿದ್ದಾರೆ. ಈ ಜಾಮೀನನ್ನು ರದ್ದುಗೊಳಿಸುವಂತೆ ಸಿಐಡಿ ಕೋರ್ಟ್ ಮೆಟ್ಟಿಲೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com