ಮಹಿಳಾ ಆಯೋಗದ ಪತ್ರದಲ್ಲೇನಿದೆ?

ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಸಲ್ಲಿಸಿರುವ ಲಿಖಿತ ಮನವಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರು ಪ್ರಕರಣದ ತನಿಖೆಯಲ್ಲಾಗಿರುವ ಲೋಪ, ಶ್ರೀಗಳ ಬೆಂಬಲಿಗರಿಂದ ಅತ್ಯಾಚಾರ ಸಂತ್ರಸ್ತೆಯರಿಗೆ ಆಗುತ್ತಿರುವ ತೊಂದರೆಗಳ ಕುರಿತೂ ಮಾಹಿತಿ ನೀಡಿದ್ದಾರೆ...
ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರ ಮಂಗಳಂ (ಸಂಗ್ರಹ ಚಿತ್ರ)
ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರ ಮಂಗಳಂ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಸಲ್ಲಿಸಿರುವ ಲಿಖಿತ ಮನವಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರು ಪ್ರಕರಣದ  ತನಿಖೆಯಲ್ಲಾಗಿರುವ ಲೋಪ, ಶ್ರೀಗಳ ಬೆಂಬಲಿಗರಿಂದ ಅತ್ಯಾಚಾರ ಸಂತ್ರಸ್ತೆಯರಿಗೆ ಆಗುತ್ತಿರುವ ತೊಂದರೆಗಳ ಕುರಿತೂ ಮಾಹಿತಿ ನೀಡಿದ್ದಾರೆ.

ಪತ್ರದ ಸಾರಾಂಶ ಹೀಗಿದೆ?
ರಾಷ್ಟ್ರೀಯ ಮಾನವ ಹಕ್ಕು ಕಾಯ್ದೆ 1990ರ ಸೆಕ್ಷನ್ 8(1), ಸೆಕ್ಷನ್ 10(1) ಪ್ರಕಾರ ಶ್ರೀಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಆಯೋಗ ತನಿಖೆಗೆ ಸೂಚನೆ ನೀಡಿತ್ತು. ಈ ಬಗ್ಗೆ  ಆಯೋಗದ ವಿಚಾರಣೆ ಆರಂಭವಾಗುತ್ತಿದ್ದಂತೆ ಶ್ರೀಗಳು ಮತ್ತು ಅವರ ಬೆಂಬಲಿಗರು ತನಿಖೆಗೆ ಪದೇ ಪದೆ ಅಡ್ಡಿಪಡಿಸಿರುವುದು ಗಮನಕ್ಕೆ ಬಂದಿದೆ. ತನಿಖೆ ವಿಳಂಬವಾಗಲಿ ಎಂಬ ಕಾರಣಕ್ಕೆ  ನೆಲದ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಜತೆಗೆ ಸಿಐಡಿ ತನಿಖೆಯಲ್ಲೂ ಕೆಲವು ಲೋಪಗಳು ಕಂಡು ಬಂದಿವೆ. ಮಠ ಮತ್ತು ಮಠಾಧೀಶರು ನೀಡುವ ತೊಂದರೆಯಿಂದ ಸಂತ್ರಸ್ತೆ ಮತ್ತು ಅವರ ಕುಟುಂಬ ವರ್ಗಕ್ಕೆ ಪರಿಹಾರ ಕೊಡಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ.

ಮಾನಸಿಕ ಕಿರುಕುಳ ಮತ್ತು ಒತ್ತಡ ಸಹಿಸಲು ಸಾಧ್ಯವಾಗದೇ ಸಂತ್ರಸ್ತೆಯ ಕುಟುಂಬಸ್ಥರೊಬ್ಬರು ಈಗಾಗಲೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೋಷಪೂರಿತ ತನಿಖೆಯ ಜತೆಗೆ ಸಿಐಡಿ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂಬ ಕಾರಣವನ್ನೇ ನೀಡುತ್ತಿದ್ದು, ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೆ ತಡ ಮಾಡುತ್ತಿದ್ದಾರೆ.  ಸಂತ್ರಸ್ತೆಯನ್ನು ಮಹಜರು ನೆಪದಲ್ಲಿ ರಾಜ್ಯದ ಬೇರೆ ಬೇರೆ ಭಾಗಕ್ಕೆ ಕರೆದೊಯ್ದ ಸಂದರ್ಭದಲ್ಲಿ ರಾಘವೇಶ್ವರರ ಬೆಂಬಲಿಗರು ಪ್ರಾಣ ಬೆದರಿಕೆ ಹಾಕಿದ್ದಾರೆ. ಪೊಲೀಸರು ಸೂಕ್ತ ರಕ್ಷಣೆ ನೀಡುತ್ತಿಲ್ಲ. ಸಂತ್ರಸ್ತೆಗೆ ಸೇರಿದ ಬಟ್ಟೆಯಲ್ಲಿ ಶ್ರೀಗಳ ವೀರ್ಯಾಣು ಪತ್ತೆಯಾಗಿರುವುದನ್ನು ಸಿಐಡಿ ಅಧಿಕಾರಿಗಳು ಆಯೋಗಕ್ಕೆ ದೃಢಪಡಿಸಿದ್ದಾರೆ.

2014, ಡಿ.12ರಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಅವರು ನ್ಯಾಯಾಲಯದಲ್ಲೇ ಈ ವಿಚಾರ ಪ್ರಸ್ತಾಪಿಸಿದ್ದು, ಡಿಎನ್‍ಎ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು  ಹೇಳಿದ್ದಾರೆ. ಆದಾಗ್ಯೂ ತನಿಖೆ ವಿಳಂಬವಾಗುತ್ತಿದೆ. ಈ ಮಧ್ಯೆ ಶ್ರೀಗಳಿಂದ ತಮಗೆ ಇನ್ನಷ್ಟು ಬೆದರಿಕೆ ಬರುತ್ತಿದ್ದು, ಜಾಮೀನು ರದ್ದು ಮಾಡುವಂತೆ ಸಂತ್ರಸ್ತೆ ನ್ಯಾಯಾಲಯ ಮತ್ತು ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಮರ್ಪಕ ತನಿಖೆ ನಡೆಸದೇ ಇದ್ದರೆ ಮಹಿಳೆಯರಿಗೆ ಅಭದ್ರತೆ ಕಾಡುತ್ತದೆ. ಮುಕ್ತ, ನ್ಯಾಯ ಸಮ್ಮತ ತನಿಖೆ ಅಗತ್ಯ. ಹೀಗಾಗಿ ಸ್ವಾಮೀಜಿ  ಸಾಕ್ಷಿ ಮೇಲೆ ಪ್ರಭಾವ ಭೀರುವುದನ್ನು ತಡೆಯಲು ಜಾಮೀನು ರದ್ದು ಮಾಡುವ ಅವಶ್ಯಕತೆ ಇದೆ. ಈ ದಿಶೆಯಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತನಿಖೆ ಚುರುಕಿಗೆ ಹಲವು ಸಂಘಟನೆಗಳ ಆಗ್ರಹ
ಬೆಂಗಳೂರು:
ರಾಘವೇಶ್ವರ ಶ್ರೀ ವಿರುದ್ಧ ದಾಖಲಾಗಿರುವ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆ ವಿಳಂಬ ಆಗುತ್ತಿರುವುದನ್ನು ಮಹಿಳಾ ಸಂಘಟನೆಗಳು ಖಂಡಿಸಿವೆ. ಮೊದಲ ಪ್ರಕರಣ  ಸಂಬಂಧ ವಿಚಾರಣೆ ಪ್ರಾರಂಭವಾಗಿ ವರ್ಷ ಕಳೆದರೂ ಇನ್ನೂ ಮುಗಿಯದಿರುವುದು ಅನುಮಾನಾಸ್ಪದವಾಗಿದೆ. ರಾಜ್ಯದಲ್ಲಿ ಈ ಹಿಂದೆ ಇಂತಹ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗಿತ್ತು  ಎಂದಿವೆ. ಅಖಿಲ ಭಾರತ ಜನವಾದಿ ಸಂಘಟನೆ, ಸಿಐಟಿಯು, ಎಸ್‍ಎಫ್ ಐ, ಡಿವೈಎಫ್ ಐ, ಯುವತಿಯರ ಉಪ ಸಮಿತಿ, ಪ್ರಾಂತ ರೈತ ಸಂಘದ ಮಹಿಳೆಯರ ಉಪ ಸಮಿತಿ ಸಂಘಟನೆಗಳು  ಬಂಧನಕ್ಕೆ ಒತ್ತಾಯಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com