ಬೆಂಗಳೂರು: ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನ, ಚಿನ್ನದ ಅಂಬಾರಿ ಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದೆ.
ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪಿ.ವಿ. ನಂಜರಾಜೇ ಅರಸ್ ಈ ಅರ್ಜಿ ಸಲ್ಲಿಸಿದ್ದಾರೆ. ಸಿಂಹಾಸನ ಮತ್ತು ಅಂಬಾರಿ ಸರ್ಕಾರಕ್ಕೆ ಸೇರಿದ್ದಾದರೂ ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ ವಶದಲ್ಲಿರುವುದು ಅಕ್ರಮವಾಗಿದೆ. ಅಲ್ಲದೆ ಇವೆರಡೂ ಸರ್ಕಾರದ್ದಾಗಿದ್ದರೂ ಸರ್ಕಾರ ಇವೆರಡನ್ನು ಪಡೆಯಲು ರಾಜಧನ ನೀಡುತ್ತಿದೆ. ಪ್ರಮೋದಾದೇವಿಯವರಿಗೆ ದಸರಾ ಮಹೋತ್ಸವಕ್ಕೆ ಆಹ್ವಾನ ನೀಡುವ ವೇಳೆ ಅವರಿಗೆ ನೀಡುವ ಲಕ್ಷಾಂತರ ರುಪಾಯಿ ಗೌರವಧನವನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು.
ಪ್ರಮೋದಾದೇವಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಮೈಸೂರು ಅರಮನೆ ಸ್ವಾಧೀನ ಕಾಯ್ದೆ1998ರ ಪ್ರಕಾರ ಮೈಸೂರು ಅರಮನೆ, ಅದರ ಎಲ್ಲ ವಸ್ತುಗಳು ಸರ್ಕಾರದ ಸ್ವತ್ತು. 1968ರಲ್ಲಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ 26ನೇ ತಿದ್ದುಪಡಿ ಮಾಡಿ, ಮಾಜಿ ಮಹಾರಾಜರಿಗೆ ಸರ್ಕಾರದಿಂದ ಗೌರವಧನ ನೀಡಬಾರದು ಎಂದು ಕಾನೂನು ಜಾರಿ ಮಾಡಿದೆ ಎನ್ನುವುದು ಅರ್ಜಿದಾರರ ವಾದ.
Advertisement