ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಯಾರೋ ಮಾಡಿದ ತಪ್ಪಿಗೆ ಪಿಯು ಮಂಡಳಿ ನಿರ್ದೇಶಕಿ ಪಲ್ಲವಿ ಅಕುರಾತಿ ಅವರು ಬಲಿಯಾದರೆ ಎಂಬ ಅನುಮಾನ ಕಾಡುತ್ತಿದೆ.
ಏಕೆಂದರೆ ಪಲ್ಲವಿ ಆಕುರಾತಿ ಅವರು ಇತ್ತೀಚೆಗಷ್ಟೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಚಾರ್ಜ್ ತೆಗೆದುಕೊಳ್ಳುವ ವೇಳೆಗೆ ಪಿಯುಸಿ ಪರೀಕ್ಷಾ ಪ್ರಕ್ರಿಯೆ ಮುಕ್ತಾಯವಾಗಿತ್ತು. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ನಿರ್ದೇಶಕಿ ಪಲ್ಲವಿ ಅಕುರಾತಿ ಅವರ ಯಾವುದೇ ತಪ್ಪಿಲ್ಲದಿದ್ದರೂ ಸರ್ಕಾರ ಮಾತ್ರ ಅವರನ್ನೇ ನೇರಹೊಣೆ ಮಾಡಿ ಅವರನ್ನು ವರ್ಗಾವಣೆ ಮಾಡಿದೆ.
ಪಲ್ಲವಿ ಅಕುರಾತಿ ಅವರ ಹೊಣೆಗಾರಿಕೆ ವಹಿಸಿ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅದೇ ಇಲಾಖೆಯಲ್ಲಿ ಪಲ್ಲವಿ ಅವರಿಗಿಂತಲೂ ಮೊದಲು ಶಿಕ್ಷಣ ಇಲಾಖೆಗೆ ನೇಮಕವಾಗಿದ್ದ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಅನುಮಾನಗಳು ಕೂಡ ಕಾಡತೊಡಗಿವೆ.
ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ ಪಲ್ಲವಿ ಅವರಿಗಿಂತ ಮೊದಲೇ ಡಿಎಸ್ ರಮೇಶ್ ಮತ್ತು ಚಕ್ರವರ್ತಿ ಮೋಹನ್ ಎಂಬ ಇಬ್ಬರು ಅಧಿಕಾರಿಗಳು ನೇಮಕವಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲದೆ ಇವರ ಅಧೀನದಲ್ಲಿಯೇ ಪಿಯು ಪರೀಕ್ಷಾ ಪ್ರಕ್ರಿಯೆಗಳು ನಡೆದಿದ್ದವು. ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯವಾದ ಬಳಿಕ ಅಂದರೆ ಫೆಬ್ರವರಿ 11ರಂದು ಪಲ್ಲವಿ ಆಕುರಾತಿ ಅವರು ಇಲಾಖೆಯ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಬಳಿಕ ಫೆಬ್ರವರಿ 13ರಿಂದ 28ರವರೆಗೂ ಅವರು ರಜೆಯಲ್ಲಿದ್ದರು. ರಜೆ ಬಳಿಕ ಅಗಮಿಸಿದ ಪಲ್ಲವಿ ಅವರ ಜವಾಬ್ದಾರಿ ಕೇವಲ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮತ್ತು ಫಲಿತಾಂಶ ಘೋಷಣೆ ಮಾತ್ರ. ಆಗ ಇಲಾಖೆಯ ಸಂಪೂರ್ಣ ಜವಾಬ್ದಾರಿ ಹಿರಿಯ ಅಧಿಕಾರಿಗಳ ಮೇಲೆಯೇ ಇತ್ತು.
ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿ ಇದದ್ದು ಅಧಿಕಾರಿಗಳಾದ ಡಿಎಸ್ ರಮೇಶ್ ಮತ್ತು ಚಕ್ರವರ್ತಿ ಮೋಹನ್ ಮೇಲೆ ಮಾತ್ರ. ಆದರೂ ಸರ್ಕಾರ ಪಲ್ಲವಿ ಆಕುರಾತಿ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತಿದೆ. ಇಲ್ಲಿಯವರೆಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸರ್ಕಾರದ ಕ್ರಮ ಎದುರಿಸಿದ ಅಧಿಕಾರಿಗಳ ಪಟ್ಟಿಯಲ್ಲಿ ಈ ಇಬ್ಬರು ಅಧಿಕಾರಿಗಳ ಹೆಸರೇಕಿಲ್ಲ ಎಂಬ ಶಂಕೆ ಕೂಡ ಹಲವರನ್ನು ಕಾಡುತ್ತಿದೆ.
ಇಲಾಖೆಗೆ ನೇಮಕವಾದ ಅಧಿಕಾರಿಗಳ ವಿವರ
ಆಗಸ್ಟ್ 20, 2015: ಡಿಎಸ್ ರಮೇಶ್ ಪಿಯು ಮಂಡಳಿಯ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ
ಅಕ್ಟೋಬರ್ 28, 2015: ರಜೆ ಮೇಲೆ ತೆರಳಿದ ನಿರ್ದೇಶಕ ಡಿಎಸ್ ರಮೇಶ್
ಅಕ್ಟೋಬರ್ 28ರಿಂದ ನವೆಂಬರ್ 27, 2015: ಕಾಲೇಜು ಶಿಕ್ಷಣ ಆಯುಕ್ತರಾಗಿದ್ದ ಚಕ್ರವರ್ತಿ ಮೋಹನ್ ಅವರಿಗೆ ಪಿಯು ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ
ನವೆಂಬರ್ 30, 2015: ರಜೆ ಬಳಿಕ ಕರ್ತವ್ಯಕ್ಕೆ ಹಾಜರಾದ ಡಿಎಸ್ ರಮೇಶ್
ಫೆಬ್ರವರಿ 10, 2016: ಕರ್ನಾಟಕ ಪರೀಕ್ಷಾ ಮಂಡಳಿಗೆ ಕಾರ್ಯಕಾರಿ ನಿರ್ದೇಶಕಾರಿಗಿ ಡಿಎಸ್ ರಮೇಶ್ ವರ್ಗಾವಣೆ
ಫೆಬ್ರವರಿ 11, 2016: ಪಿಯು ಮಂಡಳಿ ನಿರ್ದೇಶಕಿಯಾಗಿ ಪಲ್ಲವಿ ಆಕುರಾತಿ ಅಧಿಕಾರ ಸ್ವೀಕಾರ
ಫೆಬ್ರವರಿ 12, 2016: ರಜೆ ಮೇಲೆ ತೆರಳಿದ ಪಲ್ಲವಿ ಆಕುರಾತಿ
ಫೆಬ್ರವರಿ 15ರಿಂದ 29, 2016: ಚಕ್ರವರ್ತಿ ಮೋಹನ್ ಹಂಗಾಮಿ ನಿರ್ದೇಶಕರಾಗಿ ನೇಮಕ
Advertisement