ಬೆಂಗಳೂರು: ಬೆಂಗಳೂರಿನ ಹೊರವಲಯದ ವರ್ತೂರಿನ ವಿಬ್ ಗಯಾರ್ ಶಾಲೆ ಬಳಿ ಮತ್ತೆ ಎರಡು ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪೂರ್ವ ತಾಲ್ಲೂಕಿನ ಸರ್ಕಾರಿ ಖಾಸಗಿ ಸೇರಿದಂತೆ ಒಟ್ಟು 134 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಒಂದು ದಿನ ರಜೆ ಘೋಷಿಸಿದೆ. ಇನ್ನು ಸುತ್ತುಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸ್ಥಳೀಯರು ಮನೆ ಹೊರಗಡೆ ಬರಲು, ಒಬ್ಬಂಟಿಯಾಗಿ ಓಡಾಡಲು ಭಯಭೀತರಾಗಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿಭ್ ಗಯಾರ್ ಶಾಲೆ ಬಳಿ ಇರುವ ಸ್ಥಳೀಯರು ಎರಡು ಚಿರತೆಗಳನ್ನು ಕಂಡು ಕಿರುಚಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಕಾರ್ಯಾಚರಣೆ ವೇಳೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಹೆಚ್ಚು ಮರ ಹಾಗೂ ಪೊದೆಗಳಿರುವ ಕಾರಣ ಚಿರತೆ ಪತ್ತೆ ಕಾರ್ಯ ವಿಳಂಬವಾಗಲಿದೆ. ಹೀಗಾಗಿ ಬೋನು ಇಟ್ಟು ಅದರಲ್ಲಿ ನಾಯಿ ಕಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.