ಬೆಂಗಳೂರು: ಪ್ರವಾಸಕ್ಕೆಂದು ತೆರಳಿದ್ದ ಯುವಕರ ಗುಂಪಿನ ಕಾರೊಂದು ಕೆರೆಗೆ ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಯುವಕರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಶನಿವಾರ ನಡೆದಿದೆ.
ಸಾವನ್ನಪ್ಪಿದ್ದ ಯುವಕರು ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿಗೆ ಸೇರಿದ ಉದ್ಯೋಗಿಗಳಾಗಿದ್ದು, ಯುವಕರ ಗುಂಪು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸ್ಕಾರ್ಪಿಯೋ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ನಿನ್ನೆ ತಡರಾತ್ರಿ ಯುವಕರಿದ್ದ ಕಾರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಜನಿವಾರ ಗ್ರಾಮದ ಕೆರೆಗೆ ಪಲ್ಟಿ ಹೊಡೆದಿದೆ.
ಪರಿಣಾಮ ಕಾರಿನಲ್ಲಿದ್ದ ಜನಾರ್ದನ್ (22), ಕಾರ್ತಿಕ್ (24), ಸತೀಶ್ (24), ದಿಲೀಪ್ (24), ಜಯಂತ್ (23), ಶಿವಸ್ವಾಮಿ (24), ರಾಜು (24) ಎಂಬುವವರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಯುವಕರು ಪಾರಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಕೆರೆಗೆ ಬಿದ್ದಿದ್ದ ಏಳು ಯುವಕರ ಮೃತದೇಹವನ್ನು ಹೊರತೆಗೆದಿದ್ದಾರೆ.
Advertisement