ಕೇರಳಕ್ಕೆ ಭೇಟಿ ನೀಡಿದ ಮೋದಿ 'ಸೊಮಾಲಿಯಾ ವಿಷಯ' ಪ್ರಸ್ತಾಪ ಮಾಡಲು ಕಾರಣವಾದ ಸಂಗತಿಯೇನು ಗೊತ್ತಾ?

ಇಲ್ಲಿ ಮೋದಿಯವರು ಹೇಳಿದ್ದು ಕೇರಳದಲ್ಲಿನ ಪರಿಶಿಷ್ಟ ವರ್ಗದವರ ಅವಸ್ಥೆ ಬಗ್ಗೆ ಮಾತ್ರ. ಪರಿಶಿಷ್ಟ ವರ್ಗದಲ್ಲಿನ ಶಿಶು ಮರಣ ದರವನ್ನಷ್ಟೇ ಮೋದಿ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ತಿರುವನಂತಪುರಂ: ಮೇ 8ರಂದು ಭಾನುವಾರ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದಾರೆ ಎಂದು ಕೇರಳಿಗರು ಕುಪಿತಗೊಂಡು ಸಾಮಾಜಿಕ ತಾಣಗಳಲ್ಲಿ ಪೋ ಮೋನೇ ಮೋದಿ (ಪೋ ಮೋನೇ ಎಂದರೆ ಹೋಗು ಮಗಾ ಎಂದರ್ಥ) ಎಂಬ ಹ್ಯಾಶ್‌ಟ್ಯಾಗ್‌ನಿಂದ ಆನ್‌ಲೈನ್ ಯುದ್ಧ ನಡೆಸುತ್ತಿದ್ದಾರೆ.
ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಮೋದಿ ಕ್ಷಮೆಯಾಚನೆ ಮಾಡಬೇಕೆಂದು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಇತರ ರಾಜಕೀಯ ನಾಯಕರು ಒತ್ತಾಯಿಸಿದ್ದೂ ಆಯ್ತು. ಆದರೆ ಮೋದಿಯವರು ನಿಜವಾಗಿಯೂ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದರೆ? ಎಂಬ ಪ್ರಶ್ನೆಯನ್ನು ಕೇಳಿದರೆ ಅದಕ್ಕೆ ಉತ್ತರವನ್ನು ಕೊಡಲು ಒಂದಷ್ಟು ವಿವರಣೆಗಳು ಬೇಕಾಗುತ್ತದೆ.
1.  ಮೋದಿ ಹೇಳಿದ್ದೇನು?
ಯಹಾ ಕೇರಲ್ ಕಿ ಜನ್ ಜಾತೀ, ಜನ್‌ತಾ, ಶೆಡ್ಯೂಲ್ಡ್ ಟ್ರೈಬ್ ಉಸ್ಮೇ ಜೋ ಚೈಲ್ಡ್ ಡೆತ್  ರೇಶ್ಯೋ ಹೈ, ಸೊಮಾಲಿಯಾ ಸೆ ಭೀ ಸ್ಥಿತಿ ಖತರ್‌ನಾಕ್ ಹೈ. ಅಭೀ ಕುಚ್ ದಿನ್ ಪೆಹಲೇ, ಮೀಡಿಯಾ ಮೈ ದರ್ದ್‌ನಾಕ್ ಚಿತ್ರ್ ದೇಖ್‌ನೇಕೋ ಮಿಲಾ...ಪೆರಾವೂರ್ ಮೇ  ಶೆಡ್ಯೂಲ್ಡ್ ಟ್ರೈಬ್ ಕೆ ಬಾಲಕ್ ಕೋದೇ ಕೆ ಧೇರ್ ಮೇ ಭೋಜನ್ ತಲಾಶ್ ಕರ್ ರಹೇ ಹೈ - ಹೀಗಂತ ಹಿಂದಿಯಲ್ಲಿ ಭಾಷಣ ಮಾಡಿದ್ದರು ಮೋದಿ. ಅವರ ಮಾತಿನ ಅನುವಾದ  ಹೀಗಿದೆ
ಕೇರಳದಲ್ಲಿರುವ ಪರಿಶಿಷ್ಟ ವರ್ಗದವರಲ್ಲಿನ ಶಿಶು ಮರಣ ದರವು ಸೊಮಾಲಿಯಾದಲ್ಲಿನ ಶಿಶುಮರಣ ದರಕ್ಕಿಂತಲೂ ಭೀಕರವಾಗಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಒಂದು ಚಿತ್ರವನ್ನು ನೋಡಿದೆ. ಪರವೂರು (ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ) ಎಂಬಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಬಾಲಕನೊಬ್ಬ ಕಸದ ರಾಶಿಯಲ್ಲಿ ಆಹಾರವನ್ನು ಹುಡುಕುತ್ತಿರುವ ದೃಶ್ಯವಾಗಿತ್ತು ಅದು.
ಇಲ್ಲಿ ಮೋದಿಯವರು ಹೇಳಿದ್ದು ಕೇರಳದಲ್ಲಿನ ಪರಿಶಿಷ್ಟ ವರ್ಗದವರ ಅವಸ್ಥೆ ಬಗ್ಗೆ ಮಾತ್ರ. ಪರಿಶಿಷ್ಟ ವರ್ಗದಲ್ಲಿನ ಶಿಶು ಮರಣ ದರವನ್ನಷ್ಟೇ ಮೋದಿ ಸೊಮಾಲಿಯಾಗೆ ಹೋಲಿಕೆ ಮಾಡಿದ್ದಾರೆಯೇ ಹೊರತು ಕೇರಳ ರಾಜ್ಯವನ್ನು ಸೊಮಾಲಿಯಾ ಎಂದು ಹೇಳಲಿಲ್ಲ.
2.ಮೋದಿ ಪ್ರಸ್ತಾಪಿಸಿದ ಆ ಸುದ್ದಿ ಯಾವುದು?
(ಮಾತೃಭೂಮಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ)
2015 ನವೆಂಬರ್ 4 ರಂದು ಮಲಯಾಳಂ ಪತ್ರಿಕೆ 'ಮಾತೃಭೂಮಿ' ಬಾಲಕನೊಬ್ಬ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಿರುವ ದೃಶ್ಯವನ್ನು ಸೆರೆ ಹಿಡಿದು, ಆ ಬಗ್ಗೆ ವರದಿ ಪ್ರಕಟಿಸಿತ್ತು. 
ಪರವೂರಿನಲ್ಲಿರುವ  ಪರಿಶಿಷ್ಟ ವರ್ಗದ ಹುಡುಗನೊಬ್ಬ ಗ್ರಾಮ ಪಂಚಾಯತ್‌ನ ಡಂಪಿಂಗ್ ಯಾರ್ಡ್‌ನಿಂದ ಆಹಾರ ಹುಡುಕುತ್ತಿದ್ದಾಗ ಮಾತೃಭೂಮಿ ಪತ್ರಿಕೆಯ ನಾಜರ್ ವಲಿಯಡತ್ ಆ ಸಂದರ್ಭವನ್ನು ಸೆರೆ ಹಿಡಿದಿದ್ದರು. ಈ ಪತ್ರಕರ್ತ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ ಆಗಲೇ ಆ ಬಾಲಕನ ಕುಟುಂಬದವರಿಗೆ ವಿಷಯ ತಿಳಿಸಿದ್ದನು. ಸುದ್ದಿಯನ್ನು ಪ್ರಕಟಿಸಿದ ಪತ್ರಿಕೆ ಈ ಬಗ್ಗೆ ಸರ್ಕಾರ ಮತ್ತು ಇನ್ನಿತರ ಆಡಳಿತ ವರ್ಗದ ಗಮನ ಸೆಳೆದಿದ್ದರು.
ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಇನ್ನಿತರ ಮಾಧ್ಯಮಗಳೂ ಈ ಸುದ್ದಿಯನ್ನು ಪ್ರಕಟಿಸಿ ಜನರ ಗಮನ ಸೆಳೆದಿದ್ದವು. 
ಆ ಡಂಪಿಂಗ್ ಯಾರ್ಡ್‌ನಲ್ಲಿ ದಿನಾ ಹೋಟೆಲ್ ಮತ್ತು ಬೇಕರಿ ವೇಸ್ಟ್ ಗಳನ್ನು ಸುರಿಯಲಾಗುತ್ತಿತ್ತು. ಪಕ್ಕದ ಕಾಲನಿಯಲ್ಲಿ ವಾಸಿಸುತ್ತಿರುವ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದು ಅಲ್ಲೇ ವೇಸ್ಟ್ ಹೆಕ್ಕುವ ಕೆಲಸವನ್ನು ಮಾಡುತ್ತಿರುತ್ತಿದ್ದರು. ವೇಸ್ಟ್ ತುಂಬಿಸಿದ ಗಾಡಿ ಬಂದು ವೇಸ್ಟ್ ಸುರಿದೊಡನೇ ಈ ಮಕ್ಕಳು ಡಂಪಿಂಗ್ ಯಾರ್ಡ್‌ನ ಗೋಡೆ ಹಾರಿ ಅಲ್ಲಿ ಹಾಕಿದ್ದ ಹಣ್ಣುಗಳನ್ನು, ಪೇಸ್ಟ್ರಿ, ಸಮೋಸಗಳನ್ನು ಹೆಕ್ಕುತ್ತಿದ್ದರು. ಹೀಗೆ ಅಲ್ಲಿಂದ ಹೆಕ್ಕಬೇಡಿ ಎಂದು ಮಕ್ಕಳಿಗೆ ಬುದ್ಧಿ ಹೇಳಿ, ಅಧಿಕಾರಿಗಳೂ ತಾಕೀತು ನೀಡಿದ್ದರೂ ಮಕ್ಕಳು ಮಾತ್ರ ಕ್ಯಾರೇ ಅನ್ನುತ್ತಿರಲಿಲ್ಲ ಎಂದು ವೇಸ್ಟ್ ತಂದು ಹಾಕುವ ಟ್ರಕ್ ಚಾಲಕ ವಿಜೇಶ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿನ ಸುದ್ದಿಯ ಪರಿಣಾಮ ಅಲ್ಲಿದ್ದ ಎರಡು ಕುಟುಂಬಗಳಿಗೆ ವಾಸಿಸಲು ಬೇರೆ ಭೂಮಿಯನ್ನು ನೀಡಲಾಯಿತು.  
ವಾಸ್ತವವೇನೆಂದರೆ ಈ ಮಕ್ಕಳಿಗೆ ಮನೆಯಲ್ಲಿ ಉಣ್ಣುವುದಕ್ಕೇನೂ ಸಮಸ್ಯೆಯಿರಲಿಲ್ಲ. ಅವರ ಕುಟುಂಬದಲ್ಲಿ ಬಡತನವಿದ್ದರೂ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯಂತೂ ಇರಲಿಲ್ಲ. 
ಹೀಗೆ ಡಂಪಿಂಗ್ ಯಾರ್ಡ್‌ನಿಂದ ಆಹಾರ ಹೆಕ್ಕುತ್ತಿದ್ದ ಮಕ್ಕಳನ್ನು ವಯನಾಡ್‌ನಲ್ಲಿರುವ ರೆಸಿಡೆನ್ಶಿಯನ್ ಶಾಲೆಗೆ ಸೇರಿಸಲಾಗಿದ್ದರೂ, ಈ ಮಕ್ಕಳು ಅಲ್ಲಿಂದ ತಪ್ಪಿಸಿ ಓಡಿಕೊಂಡು ಬಂದಿದ್ದರು. ಆಮೇಲೆ ಈ ಮಕ್ಕಳನ್ನು ಕಾಲನಿ ಪಕ್ಕದಲ್ಲೇ ಇರುವ ಶಾಲೆಗೆ ಸೇರಿಸಲಾಯಿತು ಎಂದು ಕಣ್ಣೂರು ಜಿಲ್ಲಾಧಿಕಾರಿ ಪಿ. ಬಾಲಕೃಷ್ಣನ್ ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com