ಕಾವೇರಿಗಾಗಿ ರೈಲು ಬಂದ್; ರಾಜ್ಯಾದ್ಯಂತ ಬಿಗಿ ಭದ್ರತೆ!
ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಆಗ್ರಹಿಸಿ ಸೆಪ್ಟೆಂಬರ್ 5ರಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಗುರುವಾರ ರಾಜ್ಯಾದಂತ ಕನ್ನಡಪರ ಸಂಘಟನೆಗಳು ರೈಲ್ ರೋಕೋ ಚಳವಳಿಗೆ ಕರೆ ನೀಡಿವೆ.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಇರುವ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತೆಗಾಗಿ ಸುಮಾರು15 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ರೈಲ್ವೇ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ. ಪ್ರಮುಖವಾಗಿ ಬೆಂಗಳೂರು, ಮಂಡ್ಯ, ಮೈಸೂರು, ಮಡಿಕೇರಿ, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ರೈಲ್ವೇ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರೈಲ್ವೇ ವಿಶೇಷ ಭದ್ರತಾ ಪಡೆಗಳು, ರ್ಯಾಪಿಡ್ ಆ್ಯಕ್ಷನ್ ಫೋರ್ಸ್, ಸಶಸ್ತ್ರ ಸೀಮಾಬಲ ದಳ, ಇಂಡೋ-ಟಿಬೆಟ್ ಭದ್ರತಾ ಪಡೆಗಳು, ತುರ್ತು ಪ್ರಹಾರ ದಳ ಹಾಗೂ ಅಶ್ರುವಾಯು ದಳಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.
ಇನ್ನು ರೈಲ್ವೇ ಇಲಾಖೆ ರೈಲ್ ರೋಕೋ ಚಳವಳಿಗೆ ಅನುವುಮಾಡಿಕೊಡದೇ ಇರಲು ನಿರ್ಧರಿಸಿದ್ದು, ಇದೇ ಕಾರಣಕ್ಕೆ ಸಾಂಕೇತಿಕವಾಗಿ 10-15 ನಿಮಿಷಗಳ ಕಾಲ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಸಾಮಾನ್ಯ ಸಂಚಾರ
ಇನ್ನು ಈ ಹಿಂದೆ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರಿನಲ್ಲಿ ರೈಲ್ ರೋಕೋ ಚಳವಳಿ ಇನ್ನೂ ಆರಂಭವಾಗಿಲ್ಲ. ಎಂದಿನಂತೆ ಬೆಂಗಳೂರಿನಿಂದ ರೈಲು ಸಂಚರಿಸುತ್ತಿದ್ದು, ಶತಾಬ್ದಿ ಎಕ್ಸ್ ಪ್ರೆಸ್, ಲಾಲ್ ಬಾಗ್ ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲ ಪ್ರಮುಖ ರೈಲುಗಳ ಎಂದಿನಂತೆ ಸಂಚಾರ ನಡೆಸುತ್ತಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ನಗರ ರೈಲು ನಿಲ್ದಾಣಗಳಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.