ಚೆನ್ನೈ ಪೊಲೀಸ್ ಆಯುಕ್ತ ಎಸ್ ಜಾರ್ಜ್ ಎತ್ತಂಗಡಿ; ಸ್ಮಾರಕವನ್ನಾಗಿ ಜಯಾ ನಿವಾಸ ಬದಲಿಸಿ: ಪನ್ನೀರ್ ಸೆಲ್ವಂ ಪ್ರಸ್ತಾಪ

ತಮಿಳುನಾಡು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ಚೆನ್ನೈ ಪೊಲೀಸ್ ಆಯುಕ್ತ ಎಸ್.ಜಾರ್ಜ್ ರನ್ನು ವರ್ಗಾವಣೆ ಮಾಡಲಾಗಿದ್ದು, ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಬದಲಿಸುವಂತೆ...
ಪೋಯಸ್ ಗಾರ್ಡನ್ ನಿವಾಸ
ಪೋಯಸ್ ಗಾರ್ಡನ್ ನಿವಾಸ
Updated on

ಚೆನ್ನೈ: ತಮಿಳುನಾಡು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ಚೆನ್ನೈ ಪೊಲೀಸ್ ಆಯುಕ್ತ ಎಸ್.ಜಾರ್ಜ್ ಮೇಲೆ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತೀವ್ರ ಅಸಮಾಧಾನಗೊಂಡಿದ್ದು, ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಎಐಎಡಿಎಂಕೆ ಪಕ್ಷದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ಸಿಎಂ ಪನ್ನೀರ್ ಸೆಲ್ವಂ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯಲ್ಲಿ ಚೆನ್ನೈ ಪೊಲೀಸ್ ಆಯುಕ್ತ ಎಸ್ ಜಾರ್ಜ್ ಅವರ ಕಾರ್ಯ ವೈಖರಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅವರನ್ನು ವರ್ಗಾವಣೆ ಮಾಡುವಂತೆ ತಮಿಳುನಾಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದು, ಅವರ ಆಜ್ಞೆಯಂತೆ ಇದೀಗ ಎಸ್ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಅರೋರಾ ಅವರನ್ನು ನೇಮತ ಮಾಡಿ ಆದೇಶ ಹೊರಡಿಸಲಾಗಿದೆ.

ಜಯಾ ನಿವಾಸದಿಂದ ಶಶಿಕಲಾ ಟೀಂ ಅನ್ನು ಹೊರಹಾಕಲು ಮುಂದಾದ ಆಪ್ತ ಪನ್ನೀರ್ ಸೆಲ್ವಂ, ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಬದಲಿಸಲು ಸೂಚನೆ
ತಮಿಳುನಾಡು ರಾಜಕೀಯ ಬಿಕ್ಕಟ್ಟು ದಿನಗಳೆದಂತೆ ರೋಚಕ ತಿರುವು ಪಡೆಯುತ್ತಿದ್ದು, ಇದೀಗ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರನ್ನು ಪೋಯಸ್  ಗಾರ್ಡನ್ ನಲ್ಲಿರುವ ಜಯಲಲಿತಾ ಅವರ ನಿವಾಸದಿಂದಲೇ ಹೊರಗೋಡಿಸಲು ಪನ್ನೀರೆ ಸೆಲ್ವಂ ನಿರ್ಧರಿಸಿದ್ದಾರೆ.

ಪ್ರಸ್ತುತ ಶಶಿಕಲಾ ಮತ್ತು ಅವರ ಗ್ಯಾಂಗ್ ತಂಗಿರುವ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಬದಲಿಸಲು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ನಿರ್ಧರಿಸಿದ್ದು, ಈ ಬಗ್ಗೆ ಅಧಿಕಾರಿಗಳಿಗೆ  ಸೂಚನೆ ನೀಡಿದ್ದಾರೆ. ಆ ಮೂಲಕ ತಮ್ಮ ಶಶಿಕಲಾ ಬಣವನ್ನು ಪೋಯಸ್ ಗಾರ್ಡನ್ ನಿವಾಸದಿಂದ ಹೊರಗೋಡಿಸಲು ಪನ್ನೀರ್ ಸೆಲ್ವಂ ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಪನ್ನೀರ್ ಸೆಲ್ವಂ ಅವರ ಕಚೇರಿ ಅಧಿಕೃತವಾಗಿ  ಪ್ರಕಟಣೆ ಹೊರಡಿಸಿದ್ದು, ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಪ್ರಸ್ತುತ ತಮಿಳುನಾಡು ರಾಜಕೀಯ ಬಿಕ್ಕಟ್ಟು ಸಂಬಂಧ ಪನ್ನೀರ್ ಸೆಲ್ವಂ ಬಣ ಸಿಎಂ ಕಚೇರಿಯಲ್ಲಿ ಮೊಕ್ಕಾಂ ಹೂಡಿದ್ದರೆ, ಶಶಿಕಲಾ ಮತ್ತು ಅವರ ಗ್ಯಾಂಗ್ ಜಯಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ಮೊಕ್ಕಾಂ ಹೂಡಿ  ರಾಜಕೀಯ ಶಡ್ಯಂತ್ರ ರೂಪಿಸುತ್ತಿದ್ದಾರೆ. ನಿನ್ನೆಯಷ್ಟೇ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆಯಿಂದ ತೆಗೆದು ಹಾಕಿದ್ದರು, ಅಲ್ಲದೆ ಪನ್ನೀರ್ ಬಣದ ಪ್ರಮುಖರನ್ನು  ಪಕ್ಷದಿಂದ ಉಚ್ಛಾಟನೆ ಮಾಡಿದ್ದರು.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಜಯಾ ಸಾವಿನ ತನಿಖೆ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತಂತೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವದಾಗಿ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಹೇಳಿದ್ದಾರೆ. ಈ ಹಿಂದೆ ಜಯಾ ಸಾವಿಗೆ  ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವುದಾಗಿ ಹೇಳಿದ್ದ ಪನ್ನೀರ್ ಸೆಲ್ವಂ ಇದೀಗ ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಜಯಾ ಸಾವಿಗೆ ಸಂಬಂಧಿಸಿದಂತೆ  ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದ ಮುಖಂಡೆ ಹಾಗೂ ಸಂಸದೆ ಶಶಿಕಲಾ, ಜಯಾ ಸಂಬಂಧಿ ದೀಪಾ ಹಾಗೂ ಪಕ್ಷದ ಹಿರಿಯ ನಾಯಕ ಪಿಹೆಚ್ ಪಾಂಡಿಯನ್ ಅವರೂ ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com