ಸಿಎಂ ಪಳನಿ ಸ್ವಾಮಿಗೆ ಅಗ್ನಿ ಪರೀಕ್ಷೆ; ತ.ನಾಡು ರಾಜಕೀಯ ಮೇಲಾಟದ ಫೈನಲ್ ಗೆ ಕ್ಷಣಗಣನೆ

ಮಾಜಿ ಸಿಎಂ ಜಯಲಲಿತಾ ಅವರ ಸಾವು ಮತ್ತು ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬಂಡಾಯವೇಳುವುದರೊಂದಿಗೆ ಭುಗಿಲೆದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ನೂತನ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಶನಿವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಮಾಜಿ ಸಿಎಂ ಜಯಲಲಿತಾ ಅವರ ಸಾವು ಮತ್ತು ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬಂಡಾಯವೇಳುವುದರೊಂದಿಗೆ ಭುಗಿಲೆದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ನೂತನ ಸಿಎಂ  ಎಡಪ್ಪಾಡಿ ಪಳನಿ ಸ್ವಾಮಿ ಶನಿವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.

ಜೈಲಿಗೆ ಹೋಗುವ ಅಂತಿಮ ಕ್ಷಣದಲ್ಲಿ ಶಶಿಕಲಾ ತಮ್ಮ ಉತ್ತರಾಧಿಕಾರಿಯಾಗಿ ಪಳನಿ ಸ್ವಾಮಿ ಅವರನ್ನು ನೇಮಿಸಿ ಹೋಗಿದ್ದು, ಇದೀಗ ಅವರ ಸಿಎಂ ಸ್ಥಾನದ ಭವಿಷ್ಯ ಇನ್ನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ. ಆ ಮೂಲಕ  ಶಶಿಕಲಾ ವಿರುದ್ಧ ಬಂಡಾಯವೆದ್ದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಪರವಾಗಿ ನಿಂತ ಪಳನಿ ಸ್ವಾಮಿ ಇಬ್ಬರಿಗೂ ಈ ವಿಶ್ವಾಸ ಮತ ಯಾಚನೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವಾಸ ಮತ ಯಾಚನೆ

ಇನ್ನು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವು ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ವಿಶ್ವಾಸ ಮತ ಯಾಚನೆ ಮಾಡುತ್ತಿದ್ದು, ಇದೀಗ ಪರಿಸ್ಥಿತಿ ಎಐಎಡಿಎಂಕೆ  ವರ್ಸಸ್ ಡಿಎಂಕೆ ಬದಲಾಗಿ, ಎಐಎಡಿಎಂಕೆ ವರ್ಸಸ್ ಎಐಎಡಿಎಂಕೆ ಎಂಬತಾಗಿದೆ. ಒಟ್ಟು 235 ಸಂಖ್ಯಾಬಲದ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ 134 ಶಾಸಕರಿದ್ದು, ಬಹುಮತಕ್ಕೆ 118 ಶಾಸಕರ ಬೆಂಬಲ  ಬೇಕು. ಇನ್ನು ನಿನ್ನೆ ನಡೆದ ಕ್ಷಿಪ್ರ ರಾಜಕೀಯ ಬೆಳವಣೆಗೆಯಲ್ಲಿ ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿದ್ದ ಮೈಲಾಪುರ ಶಾಸಕ ನಟರಾಜನ್ ಅವರು ಪನ್ನೀರ್ ಸೆಲ್ವಂ ಬಣಕ್ಕೆ ಹಾರಿದ್ದು, ಪಳನಿಸ್ವಾಮಿ ಅವರ ಬೆಂಬಲಿತ ಶಾಸಕರ  ಸಂಖ್ಯೆ ಇದೀಗ 124ರಿಂದ 123ಕ್ಕೆ ಇಳಿಕೆಯಾಗಿದೆ. ಒಂದು ವೇಳೆ ಅವರು ಇನ್ನೂ 5-6 ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಬಹುಮತ ಸಾಬೀತುಪಡಿಸುವಲ್ಲಿ ಪಳನಿಸ್ವಾಮಿ ವಿಫ‌ಲರಾಗಲಿದ್ದಾರೆ.

ಸರ್ಕಾರದ ವಿರುದ್ಧ ಡಿಎಂಕೆ ಮತ
ಪಳನಿಸ್ವಾಮಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಡಿಎಂಕೆ ನಿರ್ಧರಿಸಿದೆ. ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ನಾಯಕ ಎಂ.ಕೆ.ಸ್ಟಾಲಿನ್‌ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಎಐಎಡಿಎಂಕೆ ಆಡಳಿತದಲ್ಲಿ ಕಾನೂನು  ಸುವ್ಯವಸ್ಥೆ ಕುಸಿದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಬದುಕು ದುಸ್ತರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ ಬೆಳಗ್ಗೆ 9 ಗಂಟೆಗೆ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ  ನಡುವೆ, ಶುಕ್ರವಾರ ಸೆಲ್ವಂ ಬಣದ ಸದಸ್ಯರು ಸ್ಪೀಕರ್‌ ಪಿ ಧನಪಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com