ಕೋಲ್ಕತ್ತಾ: ನಾಳೆಯಿಂದ ಎಟಿಎಂನಿಂದ ಹಣ ಹಿಂಪಡೆಯುವ ಮಿತಿಯನ್ನು ೧೦,೦೦೦ ರೂಗೆ ಹೆಚ್ಚಿಸರುವ ಆರ್ ಬಿ ಐ ಘೋಷಣೆ ಕಣ್ಣೊರೆಸುವ ತಂತ್ರ ಎಂದು ಟೀಕಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲ ನಿರ್ಬಂಧಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.
ಬ್ಯಾಂಕ್ ಗಳಲ್ಲಿ ಇನ್ನು ಹಣ ಸಿಗುತ್ತಿಲ್ಲ ಎಂದು ಕೂಡ ಅವರು ದೂರಿದ್ದಾರೆ.
"ಸರ್ಕಾರದ ಕಣ್ಣೊರೆಸುವ ಘೋಷಣೆ. ಬ್ಯಾಂಕ್ ಗಳಲ್ಲಿ ಇನ್ನು ಹಣ ಲಭ್ಯವಿಲ್ಲ. ಎಲ್ಲ ನಿರ್ಬಂಧಗಳನ್ನು ಕೂಡಲೇ ಹಿಂಪಡೆಯಬೇಕು" ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಟ್ವೀಟ್ ಮಾಡಿದ್ದಾರೆ.
ಸೋಮವಾರ ನೂತನ ಘೋಷಣೆ ಮಾಡಿದ ಆರ್ ಬಿ ಐ, ಎಟಿಎಂ ಹಣ ಹಿಂಪಡೆಯುವ ಮಿತಿಯನ್ನು ದಿನಕ್ಕೆ ೪೫೦೦ ರೂ ನಿಂದ ೧೦೦೦೦ ರೂಗೆ ಹೆಚ್ಚಿಸಿದ್ದಲ್ಲದೆ, ಚಾಲ್ತಿ ಖಾತೆಯಿಂದ ಹಣ ಹಿಂಪಡೆಯುವ ಮಿತಿಯನ್ನು ದಿನಕ್ಕೆ ೫೦ ಸಾವಿರದಿಂದ ೧ ಲಕ್ಷಕ್ಕೆ ಹೆಚ್ಚಿಸಿತ್ತು.
ಆದರೆ ಉಳಿತಾಯ ಖಾತೆಯ ವಾರದ ಮಿತಿ ೨೪,೦೦೦ ರೂ ಹಾಗೆಯೇ ಉಳಿದಿದ್ದು, ಯಾವುದೇ ಬದಲಾವಣೆಯಾಗಿಲ್ಲ.