ಜಲ್ಲಿಕಟ್ಟು ಪ್ರತಿಭಟನಕಾರರ ಮೇಲೆ ದೌರ್ಜನ್ಯ; ತಮಿಳುನಾಡು ಪೊಲೀಸ್ ಗೆ ಎನ್ ಎಚ್ ಆರ್ ಸಿ ನೋಟಿಸ್
ಚೆನ್ನೈನಲ್ಲಿ ನಡೆಯುತ್ತದ್ದ ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆಗಳ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಸೋಮವಾರ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಮಾಧ್ಯಮ ವರದಿಗಳನ್ನಾಧರಿಸಿ
ಜಲ್ಲಿಕಟ್ಟು ಪ್ರತಿಭಟನಾಕಾರನನ್ನು ಎಳೆದೊಯ್ಯುತ್ತಿರುವ ತಮಿಳುನಾಡು ಪೊಲೀಸರು
ನವದೆಹಲಿ: ಚೆನ್ನೈನಲ್ಲಿ ನಡೆಯುತ್ತದ್ದ ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆಗಳ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಸೋಮವಾರ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಮಾಧ್ಯಮ ವರದಿಗಳನ್ನಾಧರಿಸಿ ಸ್ವಯಂಪ್ರೇರಿತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಮಿಳುನಾಡು ಪೊಲೀಸ್ ಗೆ ನೋಟಿಸ್ ನೀಡಿದೆ.
ಅಪ್ರಚೋದಿತ ಪೊಲೀಸ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ತಮಿಳುನಾಡು ಪ್ರಧಾನ ಕಾರ್ಯದರ್ಶಿ, ಡಿಜಿಪಿ, ತಮಿಳುನಾಡು ಸರ್ಕಾರ ಮತ್ತು ಚೆನ್ನೈ ಪೊಲೀಸ್ ಆಯುಕ್ತರಿಗೆ ಈ ವರದಿಗಳಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಿದ್ದೇವೆ ಎಂದು ಎನ್ ಎಚ್ ಆರ್ ಸಿ ಹೇಳಿಕೆ ಮಂಗಳವಾರ ತಿಳಿಸಿದೆ.
"ಟಿವಿ ವಾಹಿನಿಗಳಲ್ಲಿ ಬಿತ್ತರಿಸಲಾದ ದೃಶ್ಯಗಳಲ್ಲಿ ಪೊಲೀಸರು ಗುಡಿಸಲುಗಳು, ಆಟೋಗಳು, ದ್ವಿಚಕ್ರ ವಾಹನಗಳು, ತರಕಾರಿ ಅಂಗಡಿ ಮುಗ್ಗಟ್ಟುಗಳು ಮತ್ತಿತರ ಆಸ್ತಿ ಪಾಸ್ತಿಗೆ ಹಾನಿ ಮಾಡಲು ಚೆನ್ನೈ ಬೀದಿಗಳಲ್ಲಿ ಬೆಂಕಿ ಹಚ್ಚಿದ್ದು ಕಂಡುಬಂದಿದೆ" ಎಂದು ಹೇಳಿಕೆ ತಿಳಿಸಿದೆ.
ಮಾಧ್ಯಮಗಳ ವರದಿಗಳ ಪ್ರಕಾರ ಪೊಲೀಸರು ಯಾವುದೇ ಎಚ್ಚರಿಕೆ ನೀಡದೆ ಪ್ರತಿಭಟನಾಕಾರರಿಗೆ ಹೊಡೆದಿರುವುದಲ್ಲದೆ ಜನರನ್ನು ಚದುರಿಸಲು ಖಾಸಗಿ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ರಕ್ತ ಸುರಿಯುತ್ತಿದ್ದ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ. ಪೊಲೀಸರು ಮನೆಗಳ ಒಳಗು ಹೊಕ್ಕಿ ಜನರಿಗೆ ಬಡಿದಿದ್ದಾರೆ. ಮರೀನಾ ಬೀಚ್ ನಿಂದ ಚೆನ್ನೈ ನಗರಕ್ಕೆ ತೆರಳುವ ಪ್ರಮುಖ ರಸ್ತೆಗಳನ್ನು ಕೂಡ ಪೊಲೀಸರು ಮುಚ್ಚಿದರು" ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.