ಮುಸ್ಲೀಮರ ಬಗ್ಗೆ ನಮಗೆ ಪಾಠ ಮಾಡಬೇಡಿ: ಪಾಕ್ ಗೆ ಭಾರತ ಎಚ್ಚರಿಕೆ
ನವದೆಹಲಿ: ಮುಸ್ಲಿಮರ ಬಗ್ಗೆ ನಮಗೆ ಪಾಠ ಮಾಡಲು ಬರಬೇಡಿ ಎಂದು ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪದೇ ಪದೇ ಭಾರತದ ಕಾಲೆಳೆಯುತ್ತಿರುವ ಪಾಕಿಸ್ತಾನಕ್ಕೆ ಅದರದೇ ಧಾಟಿಯಲ್ಲಿ ಭಾರತ ಉತ್ತರ ನೀಡಿದ್ದು, ನಿನ್ನೆ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಅಧಿವೇಶನದಲ್ಲಿ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. "ಪಾಕಿಸ್ತಾನ ಕೇವಲ ಭಯೋತ್ಪಾದಕ ಕಾರ್ಖಾನೆಯಾಗಿಯಷ್ಟೇ ಉಳಿದಿಲ್ಲ, ತನ್ನದೇ ಸ್ವಂತ ಪ್ರಜೆಗಳನ್ನು ಬಳಕೆ ಮಾಡಿಕೊಂಡು ಹಿಂದೂ, ಕ್ರಿಶ್ಚಿಯನ್, ಶಿಯಾ ಮತ್ತು ಅಹ್ಮದೀಯರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿದೆ.
ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ನಭನಿತಾ ಚಕ್ರಬರ್ತಿ ಅವರು, ಭಾರತದಲ್ಲಿನ ಮುಸ್ಲಿಮರ ಸ್ಥಿತಿಗತಿ ಹೇಗಿದೆ ಎಂದರೆ ಮುಸ್ಲಿಮರು ಭಾರತದ, ರಾಷ್ಟ್ರಪತಿ, ಪ್ರಧಾನಿ, ಉಪ ಪ್ರಧಾನಿ, ಹಿರಿಯ ಕೇಂದ್ರ ಸಚಿವರು, ಹಿರಿಯ ಸರ್ಕಾರಿ ಅಧಿಕಾರಿಗಳು, ಕ್ರಿಕೆಟ್ ತಂಡದ ನಾಯಕ, ಬಾಲಿವುಡ್ ಸೂಪರ್ ಸ್ಟಾರ್ ಗಳಾಗಿದ್ದಾರೆ. ಆದರೆ ಈ ಪರಿಸ್ಥಿತಿಯನ್ನು ನಾವು ಪಾಕಿಸ್ತಾನದಲ್ಲಿ ನೋಡಲು ಸಾಧ್ಯವಿಲ್ಲ. ಹೀಗಿದ್ದೂ ಪಾಕಿಸ್ತಾನ ಭಾರತದಲ್ಲಿರುವ ಅಲ್ಪ ಸಂಖ್ಯಾತರ ಸ್ಥಿತಿಗತಿ ಬಗ್ಗೆ ನಮಗೆ ಪಾಠ ಮಾಡಲು ಮುಂದಾಗುತ್ತಿದೆ. ಪಾಕಿಸ್ತಾನ ಮೊದಲು ತನ್ನ ದೇಶದ ಪ್ರಜೆಗಳ ಸ್ಥಿತಿಗತಿಯತ್ತ ನೋಟ ಹರಿಸಿದರೆ ಕನಿಷ್ಠ ಪಕ್ಷ ಅವರದಾರೂ ನೆಮ್ಮದಿಯಿಂದ ಬಾಳುತ್ತಾರೆ. ಪದೇ ಪದೇ ಪಾಕಿಸ್ತಾನ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾವಿಸುವ ಮೂಲ ಸುಖಾಸುಮ್ಮನೆ ವಿಶ್ವಸಂಸ್ಥೆಯ ಅಮೂಲ್ಯ ಸಮಯವನ್ನು ಹಾಳುಮಾಡುತ್ತಿದೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಪಾಕಿಸ್ತಾನಕ್ಕೆ ತಕ್ಕ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.
ಮೊದಲು ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ನೆರವು ನಿಲ್ಲಿಸಲಿ, ಬಳಿಕ ಕಾಶ್ಮೀರದಲ್ಲಿಯಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ತಾಂಡವವಾಡುವತ್ತಿರುವ ಭಯೋತ್ಪಾದನೆ ನಿಯಂತ್ರಣಕ್ಕೆ ಬರುತ್ತದೆ ಎಂದು ನಭನಿತಾ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ಸಾಂಸ್ಕತಿಕ ಮತ್ತು ಜಾತ್ಯತೀತ ಪ್ರಜಾಪ್ರಭುತ್ವದ ಭಾಗವಾಗಿದೆ. ಇಲ್ಲಿ ಸ್ವತಂತ್ರ ನ್ಯಾಯಾಂಗವಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದೆ. ಸಕ್ರಿಯ ಮತ್ತು ಸ್ವತಂತ್ರ ಮಾಧ್ಯಮವಿದ್ದು, ಉತ್ತಮ ನಾಗರೀಕ ಸಮಾಜಾದಲ್ಲಿ ಮುಸ್ಲಿಮರು ಬದುಕುತ್ತಿದ್ದಾರೆ. ಹೀಗಾಗಿ ನಮ್ಮವರ ಬಗ್ಗೆ ಪಾಕಿಸ್ತಾನ ಕಾಳಜಿ ತೋರಿಸುವ ಅಗತ್ಯವಿಲ್ಲ. ನಮ್ಮ ಕುಟುಂಬಸ್ಥರನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವ ಜ್ಞಾನ ನಮಗಿದೆ. ಪಾಕಿಸ್ತಾನ ನಮಗೆ ಪಾಠ ಮಾಡುವ ಅಗತ್ಯವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.