ಬೀಜಿಂಗ್: ಉಗ್ರ ಲಖ್ವಿಯನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯಲ್ಲಿ ಭಾರತದ ನಿರ್ಣಯಕ್ಕೆ ತಡೆಯೊಡ್ಡಿದ್ದ ಚೀನಾ,
ಭಯೋತ್ಪಾದನೆ ಹಾಗೂ ಲಖ್ವಿ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಸಿದ್ಧ ಎಂದು ತಿಳಿಸಿದೆ.
ಭಯೋತ್ಪಾದನೆ ನಾಶ ಮಾಡಲು ಜಂಟಿ ಕಾರ್ಯಾಚರಣೆ ನಡೆಸುವ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿರುವ ಚೀನಾದ ವಿದೇಶಾಂಗ ಇಲಾಖೆಯ ಏಷ್ಯನ್ ವ್ಯವಹಾರಗಳ ವಿಭಾಗದ ಉಪನಿರ್ದೇಶಕ ಹುವಾಂಗ್ ಕ್ಸಿಲಿಯಾನ್, ಚೀನಾ ಹಾಗೂ ಭಾರತ ಎರಡೂ ರಾಷ್ಟ್ರಗಳು ಭಯೋತ್ಪಾದನೆಗೆ ಗುರಿಯಾಗಿರುವ ಬಲಿಪಶುಗಳು ಎಂದು ಹೇಳಿದ್ದಾರೆ.
ಮುಂಬೈ ದಾಳಿಯ ರುವಾರಿ ಝಕಿ ಉರ್ ರೆಹಮಾನ್ ಲಖ್ವಿ ಬಿಡುಗಡೆ ವಿರೋಧಿಸಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದ ಭಾರತದ ಕ್ರಮಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆಯೊಡ್ಡಿತ್ತು. ಇದಾದ ಬಳಿಕ ಮೊದಲ ಬಾರಿಕೆ ಚೀನಾ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದು, ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಆದರೆ ಬಹುಪಕ್ಷೀಯ ಸಂಸ್ಥೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಬಗ್ಗೆ ಮತ್ತಷ್ಟು ಚರ್ಚೆ ನಡೆಯಬೇಕಿದೆ ಎಂದು ಹೇಳಿದೆ.
ವರ್ಷಾಂತ್ಯದಲ್ಲಿ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಗೆ ಸಂಬಂಧಿಸಿದ ಸಭೆ ನಡೆಯಲಿದ್ದು, ಈ ಸಭೆ ಭಯೋತ್ಪಾದನಾ ನಿಗ್ರಹ ವಿಷಯದಲ್ಲಿ ಭಾರತ ಹಾಗೂ ಚೀನಾದ ಪರಸ್ಪರ ಸಹಕಾರವನ್ನು ವೃದ್ಧಿಗೊಳಿಸಲಿದೆ ಎಂದು ಚೀನಾ ವಿಶ್ವಾಸ ವ್ಯಕ್ತಪಡಿಸಿದೆ.
Advertisement