ಜುಬಾ: ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರ ರಕ್ಷಣೆಗಾಗಿ 'ಸಂಕಟ್ ಮೋಚನ್' ತನ್ನ ಕಾರ್ಯಾಚರಣೆಯನ್ನು ಗುರುವಾರ ಆರಂಭಿಸಿರುವುದಾಗಿ ತಿಳಿದುಬಂದಿದೆ.
ವಿದೇಶಾಂಗ ರಾಜ್ಯ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ ಸಂಕಟ್ ಮೋಚನ್ ಕಾರ್ಯಾಚರಣೆ ಆರಂಭಗೊಂಡಿದ್ದು, ಈಗಾಗಲೇ ದಕ್ಷಿಣ ಸುಡಾನ್ ರಾಜಧಾನಿ ಜುಬಾದಲ್ಲಿ ಭಾರತೀಯರ ರಕ್ಷಣಾ ಕಾರ್ಯಾಚರಣೆ ಕಾರ್ಯ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಾರ್ಯಾಚರಣೆಯ ಮೊದಲ ಹೆಜ್ಜೆಯಾಗಿ ಐಎಎಫ್ ಸಿ-17 ವಿಮಾನ ಜುಬಾದಲ್ಲಿ ಇಳಿಯಲಿದೆ. ಕೆಲ ಸಾಮಾನ್ಯ ತಪಾಸಣೆ ನಂತರ ಸಂಕಷ್ಟದಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಐಎಎಫ್ ಸಿ17 ಗ್ಲೋಬ್ ಮಾಸ್ಟ್ರರ್ ವಿಮಾನ ಜುಬಾದಲ್ಲಿ ಇಳಿದಿದ್ದು, ವಿಮಾನದಲ್ಲಿ ವಿಕೆ. ಸಿಂಗ್ ಅವರು ಕೂಡ ದಕ್ಷಿಣ ಸುಡಾನ್ ಗೆ ಭೇಟಿ ನೀಡಿ, ದಕ್ಷಿಣ ಸುಡಾನ್ ವಿದೇಶಾಂಗ ಸಚಿವ ದೆಂಗ್ ಅಲೋರ್ ಕೌಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
Advertisement