ಇಸ್ಲಾಮಾಬಾದ್: ಕಾಶ್ಮೀರದ ವಿಚಾರವನ್ನು ಸೇರ್ಪಡೆಗೊಳಿಸಿದ್ದೇ ಆದರೆ, ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಹೇಳಿದ್ದಾರೆ.
ಈ ಕುರಿತಂತೆ ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿರುವ ಅವರು, ದೇಶದ ಗಡಿ, ನೀರು, ಹಾಗೂ ಭೂಮಿಯ ವಿಚಾರ ಸಂಬಂಧ ನೆರೆ ರಾಷ್ಟ್ರ ಯಾವುದೇ ರೀತಿಯಿಂದ ದಾಳಿ ನಡೆಸಿದರೂ ಅದನ್ನು ಎದುರಿಸಲು ಪಾಕಿಸ್ತಾನ ಸೈನಿಕರು ಸಮರ್ಥರಾಗಿದ್ದಾರೆ. ಆದರೆ, ಭಾರತದ ಆಕ್ರಮಣಶೀಲ ದಾಳಿಗೆ ಪಾಕಿಸ್ತಾನ ಎಂದಿಗೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸದಾ ಸಿದ್ಧವಿದ್ದು, ಕಾಶ್ಮೀರ ವಿಚಾರವನ್ನು ಮಾತುಕತೆಯಲ್ಲಿ ಸೇರ್ಪಡೆಗೊಳಿಸಿದರೆ ಮಾತ್ರ ಪಾಕಿಸ್ತಾನ ಮಾತುಕತೆಗೆ ಮುಂದಾಗುತ್ತದೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಕಾಶ್ಮೀರ ವಿಚಾರ ಸಂಬಂಧ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನವಾಜ್ ಷರೀಫ್ ಅವರು ಕಾಶ್ಮೀರ ವಿಚಾರವನ್ನು ವಿಶ್ವ ಸಮುದಾಯದ ಮುಂದೆ ಪ್ರಸ್ತಾಪ ಮಾಡಿದಾಗ ಕಾಶ್ಮೀರ ವಿಚಾರ ವಿಶ್ವದ ಗಮನವನ್ನು ಸೆಳೆದಿದೆ. ಕಾಶ್ಮೀರದ ವಿಚಾರ ಸ್ಥಳೀಯ ಸ್ವಾತಂತ್ರ್ಯ ಚಳುವಳಿಯಾಗಿದ್ದು, ರಾಜಕೀಯವಾಗಿ, ರಾಜತಾಂತ್ರಿಕವಾಗಿ ಹಾಗೂ ಕಾಶ್ಮೀರಿಗರ ನೈತಿಕ ಬೆಂಬಲದ ಮೂಲಕ ನಾನು ಈ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ. ಅಲ್ಲದೆ, ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ವಿಚಾರಗಳ ಸಂಬಂಧ ರಾಜಕೀಯ ಮಾಡುವುದನ್ನು ರಾಜಕೀಯ ಪಕ್ಷಗಳು ಬಿಡಬೇಕು ಎಂದಿರುವ ಅವರು, ಪ್ರತಿಪಕ್ಷಗಳ ಟೀಕೆಗಳು ವಿಶ್ವಕ್ಕೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
Advertisement