ಬೀಜಿಂಗ್: ಭಾರತದಲ್ಲಿ ವ್ಯಾಪಕವಾಗಿ ಕರೆ ನೀಡಲಾಗಿರುವ ಚೀನಾ ಸರಕು ಬಹಿಷ್ಕಾರದ ಅಭಿಯಾನದ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಲೇಖನ ಪ್ರಕಟಿಸಿದ್ದು, ಭಾರತದ ಅಭಿಯಾನ ಹೇಳಿಕೆಗೆ ಮಾತ್ರ ಸೀಮಿತ ಎಂದು ಹೇಳಿದೆ.
ಭಾರತ ಹಮ್ಮಿಕೊಂಡಿರುವ ಅಭಿಯಾನ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಅಸಮತೋಲನವನ್ನು ಕಡಿಮೆ ಮಾಡಲು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಗ್ಲೋಬಲ್ ಟೈಮ್ಸ್ ಭಾರತವನ್ನು ಮೂದಲಿಸಿದೆ.
ಪಾಕ್ ನ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರಿಗೆ ನಿಷೇಧ ವಿಧಿಸುವ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಗೆ ಪ್ರತಿ ಬಾರಿಯೂ ಚೀನಾ ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೇಖನ ಪ್ರಕಟಿಸಿರುವ ಗ್ಲೋಬಲ್ ಟೈಮ್ಸ್, ಚೀನಾ ಸರಕು ಬಹಿಷ್ಕಾರ ಅಭಿಯಾನವನ್ನು ಟೀಕಿಸಿದ್ದು, ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಕಾರ್ಯಸಾಧ್ಯವಾಗದ ಯೋಜನೆ ಎಂದು ಹೇಳಿದೆ.
ಇದೆ ವೇಳೆ ಚೀನಾದ ಸಂಸ್ಥೆಗಳಿಗೆ ಭಾರತದಲ್ಲಿ ಹೂಡಿಕೆ ಮಾಡದಂತೆ ಎಚ್ಚರಿಕೆ ನೀಡಿರುವ ಚೀನಾ ಮಾಧ್ಯಮ, ಭ್ರಷ್ಟಾಚಾರ, ಕಠಿಣ ಪರಿಶ್ರಮ ಇಲ್ಲದ ಭಾರತದಲ್ಲಿ ಹೂಡಿಕೆ ಮಾಡಿದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಎಚ್ಚರಿಸಿದೆ. ಹಲವು ಕಾರಣಗಳಿಂದಾಗಿ ಭಾರತದ ಉತ್ಪಾದನೆ ಚೀನಾದೊಂದಿಗೆ ಸ್ಪರ್ತಿಸಲು ಸಾಧ್ಯವಿಲ್ಲ, ಭಾರತದಲ್ಲಿ ನೀರು ಹಾಗೂ ವಿದ್ಯುತ್ ಕೊರತೆ ಅತಿ ಹೆಚ್ಚಿದೆ. ಎಲ್ಲಕ್ಕಿಂತ ಭ್ರಷ್ಟಾಚಾರದ ಸಮಸ್ಯೆ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಚೀನಾ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡದೆ ಇರುವುದು ಒಳಿತು ಎಂದು ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿದೆ.
Advertisement