ಇಸ್ಲಾಮಾಬಾದ್: ಕಾಶ್ಮೀರ ವಿವಾದ ಸಂಬಂಧ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಸೋಮವಾರ ಆರೋಪಿಸಿದೆ.
ಉರಿ ಸೆಕ್ಟರ್ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರರ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯದ ಸಲಹೆಗಾರ ಸರ್ತಾಜ್ ಅಜಿಜ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತದಲ್ಲಿ ಸರ್ಕಾರದಲ್ಲಿರುವ ಹಿರಿಯ ಅಧಿಕಾರಿಗಳು ನಮ್ಮ ವಿರುದ್ಧ ಮಾಡುತ್ತಿರುವ ಆಧಾರ ರಹಿತ ಆರೋಪಗಳನ್ನು ಪಾಕಿಸ್ತಾನ ತಳ್ಳಿಹಾಕುತ್ತಿದೆ ಎಂದು ಹೇಳಿದ್ದಾರೆ.
ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಾಶ್ಮೀರದಲ್ಲಿ ಮಾನವೀಯ ಮತ್ತು ಮಾನವ ಹಕ್ಕುಗಳ ಪರಿಸ್ಥಿತಿ ಕುಸಿಯುತ್ತಿದೆ. ಕಾಶ್ಮೀರದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಪಾಕಿಸ್ತಾನ ಸೃಷ್ಟಿಸುತ್ತಿಲ್ಲ. ಕಾಶ್ಮೀರವನ್ನು ಅಕ್ರಮವಾಗಿ ಭಾರತ ಆಕ್ರಮಣ ಮಾಡಿಕೊಂಡಿರುವುದು ದೊಡ್ಡ ವಿವಾದವಾಗಿದೆ. ಈ ವಿವಾದಿಂದ ಹಿಂಸಾಚಾರ ಸೃಷ್ಟಿಗೊಂಡು ಇಂದು ನೂರಾರು ಜನರು ಬಲಿಯಾಗುವಂತಾಗಿದೆ.
ಕಾಶ್ಮೀರ ವಿವಾದದಿಂದಾಗಿ ಹಿಂಸಾಚಾರ ಸೃಷ್ಟಿಯಾಗಿದ್ದು, ಇಂದು ವಯಸ್ಸಾದವರು, ಮಹಿಳೆ ಮತ್ತು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಕಾಶ್ಮೀರ ವಿವಾದವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸುವ ಅಗತ್ಯವಿದೆ. ಉರಿ ಸೆಕ್ಟರ್ ದಾಳಿಯನ್ನು ಬಳಸಿಕೊಂಡು ಕಾಶ್ಮೀರದ ಕಡೆ ಇರುವ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
Advertisement