ಜಕಾರ್ತ: ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.
ಇಂಡೋನೇಷ್ಯಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ಸುಲಾವೆಸಿ ಪೂರ್ವ ದ್ವೀಪದ ಸಾಲುಬಿರೊ ಗ್ರಾಮದ ರೈತನನ್ನು ದೈತ್ಯ ಹೆಬ್ಬಾವು ನುಂಗಿದ್ದು, ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆಯನ್ನು ಸೀಳಿದಾಗ ರೈತನ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಮೃತ ರೈತನನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, ಸಾಲುಬಿರೋ ಗ್ರಾಮದಲ್ಲಿ ಈತ ತಾಳೆ ಹಣ್ಣು ಬೆಳೆದಿದ್ದ. ಇತ್ತೀಚೆಗೆ ಈತ ತಾಳೆ ಹಣ್ಣುಕೊಯ್ಯಲು ತೆರಳಿದ್ದ ವೇಳೆ ಆತ ನಾಪತ್ತೆಯಾಗಿದ್ದ. ನಾಪತ್ತೆಯಾಗಿದ್ದ ಈತನ ಶೋಧಕ್ಕಾಗಿ ಇಡೀ ಗ್ರಾಮಸ್ಥರು ಜಮೀನಿಗೆ ಆಗಮಿಸಿದ್ದಾಗ ಅಲ್ಲಿ ದೈತ್ಯ ಹೆಬ್ಬಾವು ಪತ್ತೆಯಾಗಿತ್ತು ಮತ್ತು ಹಾವಿನ ಹೊಟ್ಟೆ ದೈತ್ಯಾಕಾರದಲ್ಲಿ ಊದಿಕೊಂಡಿತ್ತು. ಅಲ್ಲದೆ ಅದೇ ಜಮೀನಿನಲ್ಲಿ ರೈತ ಆಕ್ಬರ್ ಧರಿಸಿದ್ದ ಬೂಟುಗಳು ಮತ್ತು ಸಮೀಪದಲ್ಲಿ ಆತ ಜಮೀನಿಗೆ ತಂದಿದ್ದ ಕೆಲ ಕೃಷಿ ಸಲಕರಣೆಗಳು ಪತ್ತೆಯಾಗಿತ್ತು.
ಇದರಿಂದ ಅನುಮಾನಗೊಂಡ ರೈತರು ಹಾವನ್ನು ಹಿಡಿದು, ಅದರ ಹೊಟ್ಟೆ ಸೀಳಿದ್ದಾರೆ. ಆಗ ಮನುಷ್ಯನ ಶವ ಪತ್ತೆಯಾಗಿದ್ದು, ಆ ಶವ ನಾಪತ್ತೆಯಾಗಿದ್ದ ಅಕ್ಬರ್ ನದ್ದೇ ಎಂದು ತಿಳಿದುಬಂದಿದೆ. ಈ ವಿಚಾರ ಕ್ಷಣ ಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಹಾವಿನ ಹೊಟ್ಟೆಯಿಂದ ರೈತನ ಶವವನ್ನು ಹೊರ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement