ನವದೆಹಲಿ: ಭಾರತದ ಕುಲಭೂಷಣ್ ಜಾದವ್ ರನ್ನು ಇರಾನ್ ನಿಂದಲೇ ಅಪಹರಿಸಿ ಪಾಕಿಸ್ತಾನಕ್ಕೆ ತಂದಿದ್ದು ಎಂಬ ವಿಚಾರವನ್ನು ಪಾಕಿಸ್ತಾನದ ಮಾಜಿ ಎಸ್ ಐಐ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.
ಕುಲಭೂಷಣ್ ಜಾಧವ್ ಬಂಧನದ ವಿಚಾರವಾಗಿ ಪಾಕಿಸ್ತಾನ ಹೇಳುತ್ತಿದ್ದ ಸುಳ್ಳು ಮತ್ತು ಕಟ್ಟುಕತೆ ಇದೀಗ ಬಯಲಾಗಿದ್ದು, ಕುಲಭೂಷಣ್ ಜಾಧವ್ ರನ್ನು ಇರಾನ್ ನಲ್ಲಿ ಹಿಡಿಯಲಾಯಿತು ಎಂದು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐನ ಮಾಜಿ ಅಧಿಕಾರಿ ಅಮ್ಜದ್ ಶೋಯೆಬ್ ಹೇಳಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾದವ್ ರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಯಿತು ಎಂದು ವಾದಿಸುತ್ತಿದ್ದ ಪಾಕಿಸ್ತಾನದ ನಾಟಕ ಇದೀಗ ಬಯಲಾಗಿದ್ದು, ಮಾಜಿ ಐಎಸ್ಐ ಅಧಿಕಾರಿ ಹೇಳಿಕೆಯಿಂದಾಗಿ ಪಾಕಿಸ್ತಾನ ಇದೀಗ ವಿಶ್ವ ಸಮುದಾಯದ ಎದುರು ಮುಜುಗರಕ್ಕೀಡಾಗಿದೆ.
ಕುಲಭೂಷಣ್ ಜಾಧವ್ ತನ್ನ ಇರಾನ್ ನಲ್ಲಿ ತಮ್ಮ ವೈಯುಕ್ತಿಕ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಪಾಕಿಸ್ತಾನವು ಅವರನ್ನು ಅಪಹರಿಸಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದು ಭಾರತವು ಪದೇ ಪದೇ ಹೇಳುತ್ತಿದೆ. ಆದರೆ ಇದನ್ನು ನಿರಾಕರಿಸುತ್ತಿರುವ ಪಾಕಿಸ್ತಾನ ಭಾರತದ ವಾದವನ್ನು ತಳ್ಳಿ ಹಾಕಿತ್ತು. ಆಲ್ಲದೆ ಜಾದವ್ ರನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಆದರೆ ಪಾಕಿಸ್ತಾನ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತ ರೀತಿಯಲ್ಲಿ ಇದೀಗ ಸ್ವತಃ ಐಎಸ್ಐನ ಮಾಜಿ ಅಧಿಕಾರಿಯೇ ಹೇಳಿಕೆ ನೀಡಿರುವುದರಿಂದ ಭಾರತವು ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ತಾನು ಮಂಡಿಸುವ ವಾದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.
ಪಾಕಿಸ್ತಾನದ ಐಎಸ್ ಐ ಅಧಿಕಾರಿಯ ಹೇಳಿಕೆಯನ್ನು ವಾದದಲ್ಲಿ ಸೇರಿಸಬೇಕೆ-ಬೇಡವೆ ಎಂಬ ಬಗ್ಗೆ ಭಾರತ ಇನ್ನೂ ತೀರ್ಮಾನಿಸಿಲ್ಲ. ಯಾವುದೇ ನಿರ್ಧಾರ ಮಾಡುವ ಮುನ್ನ ಕಾನೂನು ಸಲಹೆಗಾರರ ತಂಡದ ಜತೆ ಚರ್ಚಿಸಬೇಕು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಅಂತಿಮ ಹಂತದ ವಿಚಾರಣೆ ಇನ್ನೂ ಬಾಕಿಯಿದ್ದು, ಆಗಸ್ಟ್ ನಲ್ಲಿ ಪ್ರಕರಣದ ಅಂತಿಮ ತೀರ್ಪು ಹೊರಬರುವ ಸಾಧ್ಯತೆಯಿದೆ. ಪಾಕ್ ಸೇನಾ ಕೋರ್ಟ್ ನ ತೀರ್ಪು ರದ್ದುಪಡಿಸುವಂತೆ ಸೂಚಿಸಲು ಭಾರತ ಮನವಿ ಮಾಡಿದೆ. ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ಭಾರತ ಮಾಡಿದ ಹದಿನಾರು ಮನವಿಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದು ಕೂಡ ತಿಳಿಸಲಾಗಿತ್ತು.
Advertisement