ರಿಯಾಧ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ಬದ್ಧ ವೈರಿ ಭಾರತದೊಂದಿಗೆ ಶಾಂತಿ ಮತುಕತೆ ನಡೆಸುವ ಬಗ್ಗೆ ಮಾತನಾಡಿದ್ದಾರೆ.
ಇಮ್ರಾನ್ ಖಾನ್ ಅವರು ಈ ಹಿಂದೆಯೂ ಶಾಂತಿ ಮಾತುಕತೆಯ ವಿಚಾರ ಪ್ರಸ್ತಾಪ ಮಾಡಿದ್ದರು. ಆದರೆ ಭಾರತ ಮಾತ್ರ ಭಯೋತ್ಪಾದನೆಗೆ ಕಡಿವಾಣ ಹಾಕುವವರೆಗೆ ಯಾವುದೇ ಮಾತುಕತೆ ಇಲ್ಲ ಎಂದು ಖಡಕ್ ಆಗಿ ಹೇಳಿತ್ತು.
ಇಂದು ಸೌದಿ ಅರಿಬಿಯನ್ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಪಾಕ್ ಪ್ರಧಾನಿ, ನಾನು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ತಕ್ಷಣ ಭಾರತಕ್ಕೆ ಶಾಂತಿಯ ಹಸ್ತ ಚಾಚಿದ್ದೆ. ಆದರೆ ಭಾರತ ಇದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂದರು.
ಈಗಲೂ ನಾವು ಮಾತುಕತೆಗೆ ಸಿದ್ಧರಿದ್ದೇವೆ. ಭಾರತದಲ್ಲಿ ಚುನಾವಣೆ ಮುಗಿಯುವರೆಗೂ ಕಾಯುತ್ತೇವೆ. ಚುನಾವಣೆ ನಂತರ ಮತ್ತೆ ಶಾಂತಿಯ ಹಸ್ತ ಚಾಚುತ್ತೇವೆ ಎಂದು ಇಮ್ರಾನ್ ಖಾನ್ ಅವರು ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯನ್ನು ಪ್ರಸ್ತಾಪಿಸಿದ್ದಾರೆ.