ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತ ಮೂಲದ ದಂಪತಿ: ವರದಿ

ಅಪಾಯಕಾರಿ ಪ್ರವಾಸಿ ತಾಣ ವೀಕ್ಷಣೆಗೆಂದು ತೆರಳಿದ್ದ ಭಾರತ ಮೂಲದ ದಂಪತಿಗಳು ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ದುರಂತ ಅಂತ್ಯಕಂಡ ದಂಪತಿ
ದುರಂತ ಅಂತ್ಯಕಂಡ ದಂಪತಿ
ನ್ಯೂಯಾರ್ಕ್​: ಅಪಾಯಕಾರಿ ಪ್ರವಾಸಿ ತಾಣ ವೀಕ್ಷಣೆಗೆಂದು ತೆರಳಿದ್ದ ಭಾರತ ಮೂಲದ ದಂಪತಿಗಳು ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಖ್ಯಾತ ರಾಷ್ಟ್ರೀಯ ಉದ್ಯಾನದಲ್ಲಿ ಭಾರತೀಯ ಮೂಲದ ದಂಪತಿಗಳಾದ ವಿಷ್ಣು ವಿಶ್ವನಾಥ್​ (29 ವರ್ಷ) ಮತ್ತು ಮೀನಾಕ್ಷಿ ಮೂರ್ತಿ (30 ವರ್ಷ)  ಎಂಬುವವರು ಸುಮಾರು 800 ಅಡಿ ಪ್ರಪಾತದಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. 
ಈ ಜೋಡಿ ರ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್​ ಪಾರ್ಕ್​ ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೊಸೆಮೈಟ್ ನ್ಯಾಷನಲ್​ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು ಈ ವೇಳೆ ಪಾರ್ಕ್ ನ ತುತ್ತತುದಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ.
ಬೆಟ್ಟದ ತುದಿಯಿಂದ ಕೆಳಗೆ ಬಿದ್ದ ಪುರುಷ ಹಾಗೂ ಮಹಿಳೆಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಕ್ಟೋಬರ್ 25ರಂದೇ ನ್ಯಾಷನಲ್​ ಪಾರ್ಕ್​ ಅಧಿಕೃತ ಹೇಳಿಕೆ ನೀಡಿತ್ತು. ಆದರೆ ಸೋಮವಾರ ಈ ಮೃತ ದಂಪತಿ ಭಾರತದ ಮೂಲದವರು ಎಂದು ತಿಳಿದು ಬಂದಿದೆ. 
ದಂಪತಿ ಪ್ರಪಾತಕ್ಕೆ ಬಿದ್ದಿರುವುದರ ಕುರಿತು ನಮಗಿನ್ನೂ ಕಾರಣ ತಿಳಿದು ಬಂದಿಲ್ಲ. ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಇನ್ನೂ ಅರ್ಥೈಸಿಕೊಳ್ಳುತ್ತಿದ್ದೇವೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಕುರಿತು ಸ್ಪಷ್ಟ ಮಾಹಿತಿ ಸಿಗುವುದಿಲ್ಲ ಎಂದೆನಿಸುತ್ತದೆ. ಆದರೆ ಇದೊಂದು ದುರಂತ ಅಂತ್ಯ ಎಂದು ನ್ಯಾಷನಲ್​ ಪಾರ್ಕ್​ನ ವಕ್ತಾರ ಜೇಮ್​ ರಿಚರ್ಡ್​ ತಿಳಿಸಿದ್ದಾರೆ.
ಇನ್ನು ಕಳೆದ ಹಲವು ವರ್ಷಗಳಿಂದ ಈ ಜೋಡಿ ಅಮೆರಿಕದಲ್ಲಿ ನೆಲೆಸಿದ್ದು, ಅಮೆರಿಕದ ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಸಿಕ್ಕಮೇಲೆ ಈ ದಂಪತಿ ನ್ಯೂಯಾರ್ಕ್​ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ತಮ್ಮ 'Holidays and HappilyEverAfters' ಎಂಬ ಬ್ಲಾಗ್​ನಲ್ಲಿ ಬರೆದಿಕೊಂಡಿದ್ದಾರೆ. ಅಲ್ಲದೆ ತಮ್ಮ ಪ್ರವಾಸದ ಫೋಟೋಗಳನ್ನು ಮತ್ತು ಅನುಭವವನ್ನು ನಿಯಮಿತವಾಗಿ ಬ್ಲಾಗ್ ನಲ್ಲಿ ಬರೆಯುತ್ತಿದ್ದರಂತೆ.
ವೃತ್ತಿಯಲ್ಲಿ ಇಬ್ಬರೂ ಸಾಫ್ಟ್​ವೇರ್​ ಇಂಜಿನಿಯರ್​ಗಳಾಗಿದ್ದರು ಹಾಗೂ ನಮ್ಮ ಕಾಲೇಜಿನಲ್ಲಿ 2006ರಿಂದ 2010ರವರೆಗೆ ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು ಎಂದು ಚೆಂಗನ್ನೂರ್​ ಎಂಜಿನಿಯರಿಂಗ್​ ಕಾಲೇಜಿನ ಹೆಸರಿನ ಫೇಸ್​ಬುಕ್ ​ ಪೋಸ್ಟ್​ನಲ್ಲಿ ಬರೆದುಕೊಳ್ಳಲಾಗಿದೆ. 2014ರಲ್ಲಿ ಮೃತ ದಂಪತಿ ಮದುವೆಯಾಗಿದ್ದರು ಎನ್ನಲಾಗಿದ್ದು, ವಿಷ್ಣುವಿನ ಫೇಸ್​ ಬುಕ್​ನಲ್ಲಿ ಆತನ ಸ್ನೇಹಿತರು ದಂಪತಿಯ ಆಕಸ್ಮಿಕ ಮರಣಕ್ಕೆ ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com