ವಾಷಿಂಗ್ಟನ್ : ಫ್ರಾನ್ಸ್ ನಲ್ಲಿ ನಡೆದ ಜಿ-7 ಶೃಂಗಸಭೆಯಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟು ಕ್ಷೀಣಿಸಲು ನೆರವಾಗಿದೆ. ಇದೊಂದು ಮಹತ್ಸಾದನೆ ಎಂದು ಶ್ವೇತ ಭವನ ಹೇಳಿದೆ.
ಫ್ರಾನ್ಸ್ ನ ಬಿಯರಿಟ್ಜ್ ನಲ್ಲಿ ಆಗಸ್ಟ್ 24ರಿಂದ 26ರವರೆಗೆ ಎರಡು ದಿನ ನಡೆದ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ತಮ್ಮ ಸ್ವರಾಷ್ಟ್ರಕ್ಕೆ ಹಿಂದಿರುಗಿದ್ದರು.
ಏಕತೆ ಸಂದೇಶ, ಬಿಲಿಯನ್ ಡಾಲರ್ ವ್ಯಾಪಾರ ಒಪ್ಪಂದದ ಸುಭದ್ರತೆ, ಅಮೆರಿಕಾ- ಕೆನಡಾ ಒಪ್ಪಂದಕ್ಕೆ ಪ್ರೋತ್ಸಾಹ, ಯುರೋಪ್ ಜೊತೆಗೆ ಸದೃಢ ವ್ಯಾಪಾರ ಅಭಿವೃದ್ಧಿ ಹಾಗೂ ಭಾರತ- ಪಾಕಿಸ್ತಾನ ನಡುವಣ ಬಿಕ್ಕಟ್ಟು ಕ್ಷೀಣಿಸಲು ನೆರವಾದದ್ದು ಜಿ-7 ಶೃಂಗಸಭೆಯಲ್ಲಿ ಪ್ರಮುಖ ಮಹತ್ಸಾಧನೆಗಳಾಗಿವೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆ ವೇಳೆಯಲ್ಲಿ ಭಾರತ - ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಮಾತುಕತೆಯ ಅಗತ್ಯತೆ ಹಾಗೂ ನಮ್ಮ ರಾಷ್ಟ್ರದ ನಡುವೆ ಅತ್ಯುನ್ನತ ರೀತಿಯಲ್ಲಿ ಆರ್ಥಿಕ ಸಂಬಂಧ ಗಟ್ಟಿಗೊಳ್ಳಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಸರಿಯಲ್ಲ. ಇದು ಭಾರತ- ಪಾಕಿಸ್ತಾನ ನಡುವಣ ದ್ವೀಪಕ್ಷೀಯ ಸಮಸ್ಯೆಯಾಗಿದ್ದು, ಮೂರನೇ ರಾಷ್ಟ್ರಕ್ಕೆ ತೊಂದರೆ ಕೊಡಲು ಇಚ್ಚಿಸುವುದಿಲ್ಲ ಎಂದು ನಿನ್ನೆ ಮೋದಿ ಡೊನಾಲ್ಡ್ ಟ್ರಂಪ್ ಅವರಿಗೆ ಹೇಳಿದ್ದರು.
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಹಾಗೂ ಇಮ್ರಾನ್ ಖಾನ್ ಪರಸ್ಪರ ಮಾತುಕತೆ ಮೂಲಕ ಬಗೆಹರಿಕೊಳ್ಳುವ ವಿಶ್ವಾಸ ಹೊಂದಿರುವುದಾಗಿ ಡೊನಾಲ್ಡ್ ಟ್ರಂಪ್ ನಿನ್ನೆ ಹೇಳಿಕೆ ನೀಡಿದ್ದರು.
ಶೃಂಗಸಭೆಯಲ್ಲಿ ಅಮೆರಿಕಾದ ಮೈತ್ರಿ ರಾಷ್ಟ್ರಗಳೊಂದಿಗೂ ಚರ್ಚೆ ನಡೆಸಿರುವುದಾಗಿ ತಿಳಿಸಿರುವ ಡೊನಾಲ್ಡ್ ಟ್ರಂಪ್, ಯಶಸ್ವಿ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷರಿಗೆ ಧನ್ಯವಾದ ಹೇಳಿದ್ದಾರೆ.
Advertisement