ಕಾಶ್ಮೀರಕ್ಕೆ ಸ್ಥಾನಮಾನ ನೀಡದಿದ್ದರೆ ಭಾರತ ಜೊತೆ ಮಾತುಕತೆಯೇ ಇಲ್ಲ: ಪಾಕಿಸ್ತಾನ
ಜೈಶಂಕರ್ ಹೇಳಿಕೆ ಖಂಡಿಸಿ ಸಾರ್ಕ್ ಸಭೆಗೆ ಪಾಕ್ ವಿದೇಶಾಂಗ ಸಚಿವ ಬಹಿಷ್ಕಾರ
ಯುನೈಟೆಡ್ ನೇಷನ್ಸ್: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮರುಸ್ಥಾಪನೆ ಮಾಡದ ಹೊರತು ಭಾರತದ ಜೊತೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ಹೇಳಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಇಂದು ನಡೆಯಲಿದ್ದು ಅದಕ್ಕೂ ಮುನ್ನ ನಿನ್ನೆ ನಡೆದ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಮಂಡಳಿ ಸಭೆಯಲ್ಲಿ ಪಾಕ್ ವಿದೇಶಾಂಗ ಖಾತೆ ಸಚಿವ ಶಾ ಮಹಮ್ಮೂದ್ ಖುರೇಷಿ ಭಾರತದ ವಿದೇಶಾಂಗ ಖಾತೆ ಸಚಿವ ಜೈಶಂಕರ್ ಅವರ ಹೇಳಿಕೆಗೆ ಬಹಿಷ್ಕಾರ ಹಾಕಿದ ಘಟನೆ ನಡೆಯಿತು.
ಸಾರ್ಕ್ ಸಭೆಯಲ್ಲಿ ಸಚಿವ ಜೈಶಂಕರ್ ಅವರ ಹೇಳಿಕೆಯನ್ನು ಒಪ್ಪಲು ನಿರಾಕರಿಸಿದ ಪಾಕ್ ವಿದೇಶಾಂಗ ಸಚಿವ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ತನ್ನ ಆಡಳಿತ ತೆಕ್ಕೆಗೆ ತೆಗೆದುಕೊಂಡಿರುವ ಭಾರತ ಸರ್ಕಾರ ಮತ್ತೆ ಕಾಶ್ಮೀರಕ್ಕೆ ಮೊದಲಿನ ಸ್ವಾಯತ್ತತೆ ನೀಡದಿದ್ದರೆ ಪಾಕಿಸ್ತಾನ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು ಎಂದು ಪಾಕಿಸ್ತಾನದ ಆಡಳಿತಾರೂಢ ಟೆಹ್ರೀಕ್-ಇ-ಇನ್ಸಾಫ್ ಪಕ್ಷ ಟ್ವೀಟ್ ಮಾಡಿದೆ.
ಕಾಶ್ಮೀರ ಜನತೆಯ ಮಾನವ ಹಕ್ಕುಗಳನ್ನು ಭಾರತ ಸರ್ಕಾರ ರಕ್ಷಿಸಬೇಕು, ಅವರ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ತೊಂದರೆ ಮಾಡುವುದಿಲ್ಲ, ರಕ್ಷಣೆ ನೀಡುತ್ತೇವೆ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು. ಹಾಗಾದರೆ ಮಾತ್ರ ಪಾಕಿಸ್ತಾನ ಮಾತುಕತೆಗೆ ಮುಂದುವರಿಯುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ