ಕರಾಚಿ: ಧರ್ಮನಿಂದನೆ ಆರೋಪದ ಮೇಲೆ ಸ್ಥಳೀಯ ಪಾದ್ರಿಯೊಬ್ಬರು ಪೊಲೀಸ್ ದೂರು ನೀಡಿದ ಹಿನ್ನಲೆಯಲ್ಲಿ ಹಿಂದೂ ಪಶುವೈದ್ಯರನ್ನು ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಸಿಂಧ್ ಪ್ರಾಂತ್ಯದ ಮಿರ್ಪುಕ್ಷಾಸ್ ಜಿಲ್ಲೆಯ ಫುಲಡ್ಯೊನ್ ಪಟ್ಟಣದಲ್ಲಿರುವ ಹಿಂದೂ ಜನರ ಅಂಗಡಿಗಳು ಮತ್ತು ಟಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹಿಂದೂ ವೈದ್ಯರಾದ ರಮೇಶ್ ಕುಮಾರ್ ನನ್ನು ಕಸ್ಟಡಿಗೆ ಕರೆದೊಯ್ಯಲಾಯಿತು.
ಸ್ಥಳೀಯ ಮಸೀದಿಯ ಮುಖ್ಯ ಪಾದ್ರಿ ಮೌಲ್ವಿ ಇಶಾಖ್ ನೊಹ್ರಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ, ಹಿಂದೂ ವೈದ್ಯ ಮುಸಲ್ಮಾನರ ಪವಿತ್ರ ಗ್ರಂಥದ ಪುಟಗಳನ್ನು ಹರಿದು ಅದರಲ್ಲಿ ರೋಗಿಗಳಿಗೆ ಔಷಧಿಯನ್ನು ಕಟ್ಟಿ ಕೊಡುತ್ತಿದ್ದರು. ಈ ಸಂಬಂಧ ವೈದ್ಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ಜಾಹಿದ್ ಹುಸೇನ್ ಲೆಗ್ಹರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಗಲಭೆ ಎದ್ದ ಹಿನ್ನಲೆಯಲ್ಲಿ ತನಿಖೆ ನಡೆಸಿ ವೈದ್ಯರನ್ನು ಸೂಕ್ತ ಸುರಕ್ಷಿತ ಜಾಗಕ್ಕೆ ಕರೆದೊಯ್ಯಲಾಯಿತು ಎಂದು ಲೆಗ್ಹರಿ ತಿಳಿಸಿದ್ದಾರೆ.
ಕರಾಚಿ ಮತ್ತು ಸಿಂಧ್ ಪ್ರಾಂತ್ಯದ ಒಳ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹಿಂದೂ ಜನರಿದ್ದು ಇಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ವೈಯಕ್ತಿಕ ದ್ವೇಷಗಳಿಂದ ಬಹಳ ಹಿಂದಿನಿಂದಲೂ ಧರ್ಮನಿಂದನೆ ನಡೆಯುತ್ತಿದೆ ಎಂದು ಪಾಕಿಸ್ತಾನ ಹಿಂದೂ ಕೌನ್ಸಿಲ್ ಆರೋಪಿಸಿತ್ತು.
1987ರಿಂದ 2016ರವರೆಗೆ ಪಾಕಿಸ್ತಾನ ಧರ್ಮ ನಿಂದನೆ ಕಾನೂನಿನಡಿಯಲ್ಲಿ ಕನಿಷ್ಠ ಸಾವಿರದ 472 ಜನರ ವಿರುದ್ಧ ಕೇಸು ದಾಖಲಾಗಿದೆ. ಅಂಕಿಅಂಶ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದರೆ ಹಿಂದೂ ಧರ್ಮೀಯರ ಪ್ರಕಾರ ಅವರ ಸಂಖ್ಯೆ ಅಲ್ಲಿ ಸುಮಾರು 90 ಲಕ್ಷ.
ಪಾಕಿಸ್ತಾನದಲ್ಲಿನ ಬಹುತೇಕ ಹಿಂದೂ ಜನರು ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು ಅಲ್ಲಿನ ಮುಸಲ್ಮಾನರ ಸಂಸ್ಕೃತಿ, ಸಂಪ್ರದಾಯ, ಭಾಷೆ, ಆಚಾರ, ವಿಚಾರಗಳನ್ನು ಅನುಸರಿಸುತ್ತಿದ್ದಾರೆ.