ಉದ್ಧಟತನ ನಿಲ್ಲಿಸಿ, ಇಲ್ಲ 62ರ ಯುದ್ಧಕ್ಕಿಂತ ಹೆಚ್ಚು ಹಾನಿಯಾಗುತ್ತದೆ: ಭಾರತಕ್ಕೆ ಚೀನಾ ಎಚ್ಚರಿಕೆ

ಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.
ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು

ನವದೆಹಲಿ: ಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.

ಎಲ್ಎಸಿನಲ್ಲಿ ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಯೋಧರ ಅತಿಕ್ರಮಣವನ್ನು ಭಾರತೀಯ ಸೈನಿಕರು ಹಿಮ್ಮೆಟಿಸಿದ ಬೆನ್ನಲ್ಲೇ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಭಾರತದ ವಿರುದ್ಧ ಕಿಡಿಕಾರಿದೆ. 'ಭಾರತ ಏನಾದರೂ ಚೀನಾ ತಂಟೆಗೆ ಬಂದರೆ 1962ರ ಯುದ್ಧದಲ್ಲಿ ಆದದ್ದಕ್ಕಿಂತ ಹೆಚ್ಚು ನಷ್ಟವನ್ನು ಉಂಟು  ಮಾಡುವುದಾಗಿ ಹೇಳಿದೆ. ಅಲ್ಲದೆ ಭಾರತ ಶಕ್ತಿಶಾಲಿ ಚೀನಾವನ್ನು ಎದುರು ಹಾಕಿಕೊಳ್ಳುತ್ತಿದೆ. ತನಗೆ ಅಮೆರಿಕದಿಂದ ಬೆಂಬಲ ಸಿಗಲಿದೆ ಎಂಬ ಭ್ರಮೆಯನ್ನು ಭಾರತ ಕಾಣುವುದು ಬೇಡ. ನಮ್ಮ ಜೊತೆಗೆ ಭಾರತಕ್ಕೆ ಸ್ಪರ್ಧೆಯೇ ಬೇಕೆಂದಾದರೆ, ಚೀನಾದ ಬಳಿ ಭಾರತಕ್ಕಿಂತ ಹೆಚ್ಚು ಸೇನಾ ಸಾಮರ್ಥ್ಯ ಹಾಗೂ  ಸಲಕರಣೆಗಳಿವೆ. ಭಾರತ ತನ್ನ ಸೇನಾ ಸಾಮರ್ಥ್ಯ ಪ್ರದರ್ಶಿಸಲು ಬಂದರೆ ಚೀನಾದ ಸೇನೆ ಖಂಡಿತ ಭಾರತದ ಸೇನೆಗೆ 1962ರಲ್ಲಿ ಉಂಟುಮಾಡಿದ್ದಕ್ಕಿಂತ ಹೆಚ್ಚು ನಷ್ಟ ಉಂಟುಮಾಡುವುದು ನಿಶ್ಚಿತ ಎಂದು ಪತ್ರಿಕೆ ಗುಡುಗಿದೆ.

ಆಗಸ್ಟ್ 29-30ರ ದಿನದಂದು, ಅಂದರೆ ಶುಕ್ರವಾರ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್​ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರೆನ್ನಲಾಗಿದೆ. ಇದನ್ನು ಮೊದಲೇ ಊಹಿಸಿದ್ದ ಭಾರತದ ಭದ್ರತಾ ಪಡೆಗಳು ತತ್​ಕ್ಷಣವೇ ಜಾಗೃತಗೊಂಡು ಚೀನೀ  ಸೈನಿಕರನ್ನು  ಹಿಮ್ಮೆಟ್ಟಿಸಿದ್ದರು. ಪ್ಯಾಂಗೋಂಗ್ ಟ್ಸೋ ಸರೋವರದ ಭಾಗದಲ್ಲಿ ಚೀನೀ ಸೈನಿಕರಿಂದ ಈ ಚಟುವಟಿಕೆ ನಡೆಯಬಹುದು ಎಂದು ಭಾರತದ ಪಡೆಗಳು ಮೊದಲೇ ಅಂದಾಜು ಮಾಡಿದ್ದವು. ಹಾಗಾಗಿ, ನಮ್ಮ ಸೇನಾ ನಿಯೋಜನೆ ಹೆಚ್ಚಿಸಿದೆವು. ವಿವಾದಿತ ಗಡಿ ಸಮೀಪ ನಿಯೋಜನೆಗೊಂಡಿದ್ದ ಸೈನಿಕರು ಗಡಿ  ಯಥಾಸ್ಥಿತಿಯನ್ನು  ಮಾರ್ಪಾಡು ಮಾಡುವ ಚೀನಾ ದುರುದ್ದೇಶವನ್ನು ವಿಫಲಗೊಳಿಸಿದ್ದಾರೆ. ಮಾತುಕತೆ ಮೂಲಕ ಶಾಂತಿ ಕಾಪಾಡಲು ಭಾರತದ ಸೇನೆ ಬದ್ಧವಾಗಿದೆ. ಆದರೆ, ತನ್ನ ಭೂಪ್ರದೇಶದ ರಕ್ಷಣೆಗೂ ಅಷ್ಟೇ ಕಟಿಬದ್ಧವಾಗಿದೆ. ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್  ಮಟ್ಟದಲ್ಲಿ ಫ್ಲಾಗ್  ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನ ಚರ್ಚಿಸಲಾಗುತ್ತಿದೆ ಎಂದು ಸೇನಾ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com