ಭಾರತದ  ಆರ್ಥಿಕ ಬೆಳವಣಿಗೆ ಕುಸಿತ ತಾತ್ಕಾಲಿಕ- ಐಎಂಎಫ್ ಮುಖ್ಯಸ್ಥೆ 

ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕವಷ್ಟೇ ಎಂದು  ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದ್ದಾರೆ.
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ

ದಾವೋಸ್ : ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕವಷ್ಟೇ.ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ  ಪರಿಸ್ಥಿತಿ ಸುಧಾರಿಸಲಿದೆ ಎಂದು  ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ 2020ರಲ್ಲಿ ಮಾತನಾಡಿದ ಅವರು, 2019 ಅಕ್ಟೋಬರ್ ನಲ್ಲಿ ಐಎಂಎಫ್  ವಿಶ್ವ ಆರ್ಥಿಕ ಮುನ್ನೋಟವನ್ನು ಘೋಷಿಸಿದ್ದಾಗ ಇದ್ದ ಆರ್ಥಿಕ ಸ್ಥಿತಿಗತಿಗೂ  ಈಗಿನ ಪರಿಸ್ಥಿತಿಗೂ ಹೋಲಿಸಿದಾಗ ವಿಶ್ವದ ಆರ್ಥಿಕತೆ ಉತ್ತಮವಾಗಿದೆ ಎಂದರು.

ಅಮೆರಿಕಾ- ಚೀನಾ ನಡುವಣ ಮೊದಲ ಹಂತದ ವ್ಯಾಪಾರ ಒಪ್ಪಂದ ನಂತರ ಆರ್ಥಿಕ ಬೆಳವಣಿಗೆ ಕುಂಠಿತ ಸೇರಿದಂತೆ ಅನೇಕ ಅಂಶಗಳಲ್ಲಿ ಸಕಾರಾತ್ಮಕ ರೀತಿಯ ಬದಲಾವಣೆ ಕಂಡುಬರುತ್ತಿರುವುದಾಗಿ ಹೇಳಿದರು. ಆದಾಗ್ಯೂ, ಶೇ. 3.3 ರಲ್ಲಿನ ವಿಶ್ವ ಆರ್ಥಿಕ ಬೆಳವಣಿಗೆ ದರ ಅತ್ಯುತ್ತಮವಾದುದ್ದಲ್ಲ ಎಂದರು.

ಈಗಲೂ ಕೂಡಾ ಬೆಳವಣಿಗೆ ದರ ಉತ್ತಮವಾಗಿಲ್ಲ,  ಹೆಚ್ಚಿನ ಆಕ್ರಮಣಶೀಲಿ ಆರ್ಥಿಕ ನೀತಿಯನ್ನು ಜಾರಿಗೊಳಿಸಬೇಕಾಗಿದೆ. ರಚನಾತ್ಮಕ ಸುಧಾರಣೆ ತರಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಕ್ರಿಸ್ಟಾಲಿನಾ ಜಿಯೊರ್ಜಿವಾ ಅಭಿಪ್ರಾಯಪಟ್ಟರು.

ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಆದರೆ, ಇದು ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಇಂಡೊನೇಷ್ಯಾ, ವಿಯಟ್ನಾಂ ಮತ್ತಿತರ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ದರ ಉತ್ತಮ ರೀತಿಯಲ್ಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com