ಉಗ್ರರಿಗೆ ಪಾಕ್ ನಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಸೌಲಭ್ಯ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಝಾಡಿಸಿದ ಭಾರತ
ನ್ಯೂಯಾರ್ಕ್: ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ, ಆದರೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರೂ ಸೇರಿದಂತೆ ಬೇರೆ ನಾಗರಿಕರ ಬದುಕು ಮಾತ್ರ ಬುಡಮೇಲಾಗಿದೆ ಎಂದು ಪಾಕಿಸ್ತಾನವನ್ನು ಭಾರತ ವಿಶ್ವಸಂಸ್ಥೆ ಭದ್ರತಾ ಪರಿಷತ್ ಸಭೆಯಲ್ಲಿ ಝಾಡಿಸಿದೆ.
ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಪ್ರತಿನಿಧಿ, ರಾಯಭಾರಿ ಮುನೀರ್ ಅಕ್ರಮ್ ತಮ್ಮ ಭಾಷಣದ ಪ್ರಾರಂಭದಲ್ಲೇ ಜಮ್ಮು-ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು.
ಪಾಕಿಸ್ತಾನದ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ಖಾಯಂ ಪ್ರತಿನಿಧಿ ಕಾಜಲ್ ಭಟ್, "ಪಾಕಿಸ್ತಾನ ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಒಳಗಾದ ಉಗ್ರರ ಪೈಕಿ ಅತಿ ಹೆಚ್ಚು ಉಗ್ರರಿಗೆ ಆಶ್ರಯ ನೀಡಿರುವ ದಾಖಲೆಯನ್ನು ಹೊಂದಿದೆ ಅಷ್ಟೇ ಅಲ್ಲದೇ ಸಕ್ರಿಯಾಗಿ ಅಂತಹ ಭಯೋತ್ಪಾದಕರನ್ನು ಬೆಂಬಲಿಸುವ ಇತಿಹಾಸವನ್ನೂ ಹೊಂದಿದೆ" ಎಂದು ಆರೋಪಿಸಿದ್ದಾರೆ.
ಭಾರತದ ವಿರುದ್ಧ ಅಪಪ್ರಚಾರ ಮಾಡುವುದಕ್ಕೆ ಪಾಕಿಸ್ತಾನದ ಪ್ರತಿನಿಧಿ ಜಾಗತಿಕ ಮಟ್ಟದ ವೇದಿಕೆಯನ್ನು ದುರುಪಯೋಗಪಡಿಸಿಳ್ಳಲು ನಡೆಸುತ್ತಿರುವ ವ್ಯರ್ಥ ಪ್ರಯತ್ನ ಇದೇ ಮೊದಲೇನು ಅಲ್ಲ ಎಂದು ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ ಭಾರತ.
ಪಾಕಿಸ್ತಾನವೂ ಸೇರಿದಂತೆ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದುವುದನ್ನು ಬಯಸುತ್ತದೆ. ಯಾವುದೇ ವಿಷಯವನ್ನಾದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಬದ್ಧವಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ