ನವದೆಹಲಿ: ಡೊಮೆನಿಕಾದಲ್ಲಿ ಬಂಧನಕ್ಕೀಡಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಿ ಎಂದು ಭಾರತ ಡೊಮೆನಿಕಾ ಸರ್ಕಾರಕ್ಕೆ ಆಗ್ರಹಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ ವಂಚನೆ ಮಾಡಿ ದೇಶದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆತರಲು ತನಿಖಾ ಸಂಸ್ಥೆಗಳು ಎಲ್ಲ ರೀತಿಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು ಇದೀಗ ಅಧಿಕೃತವಾದಿ ಡೊಮೆನಿಕಾ ಸರ್ಕಾರಕ್ಕೆ ಆತನನ್ನು ಹಸ್ತಾಂತರಿಸುವಂತೆ ಆಗ್ರಹಿಸಿದೆ. ಡೊಮೆನಿಕಾದಲ್ಲಿ ಬಂಧನಕ್ಕೀಡಾಗಿರುವ ಮೆಹುಲ್ ಚೋಕ್ಸಿಯನ್ನು ಪರಾರಿಯಾದ ಭಾರತೀಯ ಪ್ರಜೆಯಂತೆ ಪರಿಗಣಿಸಬೇಕು. ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದು, ಕೂಡಲೇ ಆತನನ್ನು ಗಡೀಪಾರು ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಭಾರತ ಹೇಳಿದೆ.
ಮೆಹುಲ್ ಚೋಕ್ಸಿ ತನ್ನ ಅಪರಾಧಗಳನ್ನು ಮರೆಮಾಚಲು ಬೇರೆ ವಿದೇಶಗಳ ಪೌರತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಚೋಕ್ಸಿ ಪೌರತ್ವ ಪಡೆದಿರುವ ನೆರೆಯ ಆಂಟಿಗುವಾ ಸರ್ಕಾರ ಕೂಡ ಡೊಮಿನಿಕಾಗೆ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ.
ಇನ್ನು ಡೊಮೆನಿಕಾ ಸರ್ಕಾರ ಆತನನ್ನು ಆ್ಯಂಟಿಗುವಾಗೆ ಹಸ್ತಾಂತರಿಸುವುದಾಗಿ ಹೇಳಿತ್ತು. ಆದರೆ ಆಂಟಿಗುವಾದಲ್ಲಿ ಚೋಕ್ಸಿ ಸಂಪೂರ್ಣ ಕಾನೂನು ರಕ್ಷಣೆಯನ್ನು ಹೊಂದಿದ್ದು, ಅಲ್ಲಿಂದ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಆಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಸಂದರ್ಶನವೊಂದರಲ್ಲಿ ಚೋಕ್ಸಿಯನ್ನು ಆಂಟಿಗುವಾಕ್ಕೆ ಕರೆತರಲು ತಾವು ಅನುಮತಿಸುವುದಿಲ್ಲ. ಆತನನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಿ ಎಂದು ಮನವಿ ಮಾಡಿದ್ದರು.
ಆದರೆ ಚೋಕ್ಸಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಡೊಮೆನಿಕಾ ಕೋರ್ಟ್ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ನೀಡಿತ್ತು. ಇದೇ ಜೂನ್ 2ರಂದು ಈ ಅರ್ಜಿಯ ವಿಚಾರಣೆ ನಡೆಯಲಿದ್ದು, ಅಂದು ಚೋಕ್ಸಿ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
Advertisement