'ಭಾರತದೊಂದಿಗಿನ ಮೂರು ಯುದ್ಧಗಳಿಂದಾಗಿ...', ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣವೆಂದು ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ.
ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್

ನವದೆಹಲಿ: ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣವೆಂದು ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ.

ಪಾಕಿಸ್ತಾನದ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯವರಾಗಿದ್ದು, ಪರಸ್ಪರ ಅರ್ಥೈಸಿಕೊಂಡು ಬಾಳಬೇಕು ಎಂದು ಹೇಳಿದ್ದಾರೆ. ‘ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕುತ್ತೇವೆಯೇ ಅಥವಾ ನಾವು ಜಗಳವಾಡುತ್ತೇವೆಯೇ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತೇವೆ? ಎಂಬುದು ನಮಗೆ ಬಿಟ್ಟದ್ದು. ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದರಿಂದ ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ’ ಎಂದು ಅವರು ಹೇಳಿದ್ದಾರೆ.

ನಮ್ಮಲ್ಲಿ ಎಂಜಿನಿಯರ್‌ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ, ”ಎಂದು ಷರೀಫ್ ಸಂದರ್ಶನದಲ್ಲಿ ಹೇಳಿದರು.

ನಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುವ ಸಂದೇಶ’ವೆಂದು ಅವರು ಹೇಳಿದ್ದಾರೆ.

‘ನಾವು ದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ. ನಿಮ್ಮ ಸಂಪನ್ಮೂಲಗಳನ್ನು ಮದ್ದುಗುಂಡುಗಳಿಗಾಗಿ ವ್ಯರ್ಥ ಮಾಡಲು ನಾವು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com