ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಬೊರ್ನಿಯೊಗೆ ಶಿಫ್ಟ್: ಕಾರಣವೇನು ಗೊತ್ತೇ?

ಇಂಡೋನೇಷ್ಯಾ 2022 ರ ಮಧ್ಯಭಾಗದಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಿತ್ತು. 
ಇಂಡೋನೇಷ್ಯಾದ ಹೊಸ ರಾಜಧಾನಿ ನಿರ್ಮಾಣ ಕಾಮಗಾರಿ (ಸಂಗ್ರಹ ಚಿತ್ರ)
ಇಂಡೋನೇಷ್ಯಾದ ಹೊಸ ರಾಜಧಾನಿ ನಿರ್ಮಾಣ ಕಾಮಗಾರಿ (ಸಂಗ್ರಹ ಚಿತ್ರ)

ಜಕಾರ್ತ: ಇಂಡೋನೇಷ್ಯಾ 2022 ರ ಮಧ್ಯಭಾಗದಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಿತ್ತು. ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಹೆಚ್ಚು ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಲಾಗಿತ್ತು.

ಈಗ ಸರ್ಕಾರ ಇಂಡೋನೇಷ್ಯಾದ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ಮಹಾನಗರವು "ಸುಸ್ಥಿರ ಅರಣ್ಯ ನಗರ" ಎಂದು ಇಂಡೋನೇಷಿಯಾದ ಅಧಿಕಾರಿಗಳು ಹೇಳಿದ್ದು, ಇದು ಪರಿಸರವನ್ನು ಅಭಿವೃದ್ಧಿಯ ಕೇಂದ್ರವಾಗಿರಿಸಿಕೊಳ್ಳುತ್ತದೆ. 2045 ರ ವೇಳೆಗೆ ಇಂಗಾಲದ ತಟಸ್ಥವಾಗಿರಲು ಗುರಿಯನ್ನು ಹೊಂದಿದೆ ಎಂದು ತಿಳ್ಪಿಸಿದ್ದಾರೆ.

ಈ ಯೋಜನೆಯು ಪರಿಸರವಾದಿಗಳು ಮತ್ತು ಸ್ಥಳೀಯ ಸಮುದಾಯಗಳಿಂದ ಟೀಕೆಗೆ ಗುರಿಯಾಗಿದ್ದು, ಪರಿಸರವನ್ನು ಹಾಳುಮಾಡುತ್ತದೆ, ಒರಾಂಗುಟನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವನ್ನು ಮತ್ತಷ್ಟು ಕುಗ್ಗಿಸುತ್ತದೆ ಮತ್ತು ತಮ್ಮ ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿರುವ ಸ್ಥಳೀಯ ಜನರನ್ನು ಸ್ಥಳಾಂತರಿಸುತ್ತದೆ ಎಂಬ ಆರೋಪ ಕೇಳಿಬಂದಿದೆ. 

ಹೊಸ ರಾಜಧಾನಿಯ ವೀಕ್ಷಣೆಗೆ ಪ್ರವೇಶ ಸಾಮಾನ್ಯವಾಗಿ ಸೀಮಿತವಾಗಿದ್ದರೂ, ಮಾರ್ಚ್ ಆರಂಭದಲ್ಲಿ ನಿರ್ಮಾಣ ಪ್ರಗತಿಯನ್ನು ವೀಕ್ಷಿಸಲು ಪ್ರದೇಶದ ಕೆಲವು ಭಾಗಗಳಿಗೆ ಪ್ರವಾಸ ಮಾಡಲು ಅಸೋಸಿಯೇಟೆಡ್ ಪ್ರೆಸ್ ಗೆ  ಅನುಮತಿ ನೀಡಲಾಗಿತ್ತು.

ರಾಜಧಾನಿ ವರ್ಗಾವಣೆ ಏಕೆ?

ಜಕಾರ್ತ 10 ಮಿಲಿಯನ್ ಮಂದಿಗೆ ವಾಸಸ್ಥಾನವಾಗಿದ್ದು ದೊಡ್ಡ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ಜಗತ್ತಿನಲ್ಲೇ ಅತಿ ವೇಗವಾಗಿ ಮುಳುಗುತ್ತಿರುವ ನಗರ ಎಂದು ಗುರುತಿಸಲಾಗಿದೆ ಹಾಗೂ ಈಗಿನ ಪ್ರಮಾಣದಲ್ಲೇ ಈ ಪ್ರಕ್ರಿಯೆ ಮುಂದುವರೆದಲ್ಲಿ 2050 ರ ವೇಳೆಗೆ ನಗರದ ಮೂರನೇ ಒಂದು ಭಾಗ ಮುಳುಗಡೆಯಾಗಿರಲಿದೆ. ಅನಿಯಂತ್ರಿತ ಅಂತರ್ಜಲ ಹೊರತೆಗೆಯುವಿಕೆ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಏರುತ್ತಿರುವ ಜಾವಾ ಸಮುದ್ರದ ಮಟ್ಟದಿಂದ ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಿದೆ.

ಇಲ್ಲಿನ ಗಾಳಿ ಹಾಗೂ ಅಂತರ್ಜಲ ಅತಿಯಾಗಿ ಕಲುಷಿತಗೊಂಡಿದ್ದು, ಪ್ರವಾಹದ ಕಾರಣದಿಂದಾಗಿ ರಸ್ತೆಗಳು ಜಲಾವೃತಗೊಳ್ಳಲಿದ್ದು, ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ವರ್ಷಕ್ಕೆ 4.5 ಬಿಲಿಯನ್ ಡಾಲರ್ ನಷ್ಟು ವೆಚ್ಚವಾಗುತ್ತಿದೆ. 

ಜಕಾರ್ತಾವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಅದರ ಜನಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ದೇಶವು "ಸುಸ್ಥಿರ ನಗರ" ದೊಂದಿಗೆ ಹೊಸದಾಗಿ ಪ್ರಾರಂಭಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಧ್ಯಕ್ಷ ಜೊಕೊ ವಿಡೋಡೊ ಹೊಸ ನಗರದ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com