ಇಸ್ರೇಲ್-ಹಮಾಸ್ ಯುದ್ಧ: ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹೊರತು ಕದನ ವಿರಾಮ ಇಲ್ಲ: ಬೆಂಜಮಿನ್ ನೆತನ್ಯಾಹು

ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಕದನ ವಿರಾಮದ ಬಗ್ಗೆ ಹಲವು ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾತ್ಕಾಲಿಕ ಕದನ ವಿರಾಮದ ಮಾತುಕತೆಗಳ ಮಧ್ಯೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಗಾಜಾದಲ್ಲಿ ಕದನ ವಿರಾಮದ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು

ಜೆರುಸಲೇಂ: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಕದನ ವಿರಾಮದ ಬಗ್ಗೆ ಹಲವು ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾತ್ಕಾಲಿಕ ಕದನ ವಿರಾಮದ ಮಾತುಕತೆಗಳ ಮಧ್ಯೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಗಾಜಾದಲ್ಲಿ ಕದನ ವಿರಾಮದ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.

ಹಮಾಸ್ ಉಗ್ರರು ಅಪಹರಿಸಿರುವ ಆರು ಮಂದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿವೆ.

ಈ ನಡುವಲ್ಲೇ ಹೇಳಿಕೆ ನೀಡಿರುವ ನೆತನ್ಯಾಹು, ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳಿಗೆ ಕೊನೆ ಹಾಡಲು ಬಯಸುತ್ತೇನೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯಾವುದೇ ಕದನ ವಿರಾಮ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ನಾವು ಎಲ್ಲಾ ಮೂಲಗಳಿಂದ ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳನ್ನು ಕೊನೆಗೊಳಿಸುತ್ತಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಘೋಷಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಹಮಾಸ್ ರಸ್ತೆಗಳನ್ನು ನಿರ್ಬಂಧಿಸಿದೆ. ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೀನಿಯರ ಮೇಲೆ ಗುಂಡು ಹಾರಿಸಿದೆ. ಹಮಾಸ್ ವಿರುದ್ಧ ಯುದ್ಧದ ನಂತರ ಅನಿರ್ದಿಷ್ಟಾವಧಿಯವರೆಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭದ್ರತಾ ಹೊಣೆಗಾರಿಕೆ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಈ ನಡುವೆ ಯುದ್ಧದ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನಾಪಡೆ ಹಮಾಸ್ ಅನ್ನು ಗೆಲ್ಲಲು ಬಿಡುವುದಿಲ್ಲ. ನಾವು ದಕ್ಷಿಣ ಇಸ್ರೇಲ್​ನಲ್ಲಿ ನಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುತ್ತೇವೆ. ನಮ್ಮ ಜೀವನವನ್ನು ಮುಂದುವರಿಸುತ್ತೇವೆ. ಭೂ ಆಕ್ರಮಣದ ಆರಂಭದಿಂದಲೂ ಗಾಜಾದಲ್ಲಿ 130ಕ್ಕೂ ಹೆಚ್ಚು ಹಮಾಸ್ ಸುರಂಗಗಳನ್ನು ನಾಶಪಡಿಸಲಾಗಿದೆ. ಕಮಾಂಡ್ ಸೆಂಟರ್‌ಗಳಂತಹ ಇತರ ಭೂಗತ ಹಮಾಸ್ ಮೂಲಸೌಕರ್ಯಗಳನ್ನೂ ಸಹ ನಾಶಪಡಿಸಲಾಗಿದೆ ಎಂದು ಹೇಳಿದೆ.

ಉತ್ತರ ಗಾಜಾದಿಂದ ದಕ್ಷಿಣ ಭಾಗಕ್ಕೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ವಲಸೆ ಹೋಗುತ್ತಿದ್ದಾರೆ. ಉತ್ತರ ಗಾಜಾದ ನಿವಾಸಿಗಳಿಗೆ ಹೋರಾಟದಿಂದ ದೂರವಿರಲು ದಕ್ಷಿಣಕ್ಕೆ ತೆರಳುವಂತೆ ತಿಳಿಸಿದೆ.

ಏತನ್ಮಧ್ಯೆ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹಮಾಸ್ ಆರೋಪಿಸಿದೆ.

ಯುಎನ್‌ಆರ್‌ಡಬ್ಲ್ಯೂಎ ಮತ್ತು ಅದರ ಅಧಿಕಾರಿಗಳು ಈ ಮಾನವೀಯ ದುರಂತಕ್ಕೆ ಜವಾಬ್ದಾರರು. ಉತ್ತರದ ಗಾಜಾ ನಗರ ಪ್ರದೇಶದ ನಿವಾಸಿಗಳು ದಕ್ಷಿಣಕ್ಕೆ ಪಲಾಯನ ಮಾಡಲು ಇಸ್ರೇಲ್ ಸೇನೆ ವ್ಯವಸ್ಥೆ ಕಲ್ಪಿಸಿದ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ ಎಂದು ಹಮಾಸ್ ವಕ್ತಾರ ಸಲಾಮಾ ಮಾರುಫ್ ತಿಳಿಸಿದ್ದಾರೆ.

ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ರಾಷ್ಟ್ರಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.

ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್‌ ಅನ್ನು ನಾಶಗೈಯ್ಯುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com