ಇಸ್ರೇಲ್ ಗಾಜಾವನ್ನು ಆಕ್ರಮಿಸಿದರೆ ಮುಂದಾಗುವ ಅನಾಹುತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಇರಾನ್ ಎಚ್ಚರಿಕೆ
ಟೆಹ್ರಾನ್: ಇಸ್ರೇಲ್ ಪಡೆಗಳು ಗಾಜಾದ ಮೇಲೆ ಮಿಲಿಟರ್ ಕಾರ್ಯಾಚರಣೆ ನಡೆಸಿದರೆ ಇದು ಮಧ್ಯಪ್ರಾಚ್ಯದಲ್ಲಿ ಬೇರೆಡೆ ಸಂಘರ್ಷಗಳನ್ನು ಹೆಚ್ಚಿಸಬಹುದು ಎಂದು ಇರಾನ್ ಎಚ್ಚರಿಸಿದೆ.
ನಿಶಸ್ತ್ರ ನಾಗರಿಕರು ಮತ್ತು ಗಾಜಾದ ಜನರ ವಿರುದ್ಧ ಇಸ್ರೇಲ್ನ ದಾಳಿಗಳು ಮುಂದುವರಿದರೆ, ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ ಎಂದು ಕತಾರ್ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಹೇಳಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಇಸ್ರೇಲ್ ಗೆ ಬೇಷರತ್ ಬೆಂಬಲವನ್ನು ನೀಡಿದ್ದನ್ನು ಅಮೀರ್-ಅಬ್ದುಲ್ಲಾಹಿಯಾನ್ ಟೀಕಿಸಿದರು.
ಯುದ್ಧ ಮತ್ತು ಬಿಕ್ಕಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ತಡೆಯಲು ಆಸಕ್ತಿ ಹೊಂದಿರುವವರು, ಗಾಜಾದ ನಾಗರಿಕರ ವಿರುದ್ಧ ಪ್ರಸ್ತುತ ಅನಾಗರಿಕ ದಾಳಿಗಳನ್ನು ತಡೆಯಬೇಕಾಗಿದೆ. ಈ ಸಂಘರ್ಷದಲ್ಲಿ ಹೆಜ್ಬುಲ್ಲಾ ಸೇರಿಕೊಂಡರೆ, ಯುದ್ಧವು ಪಶ್ಚಿಮ ಏಷ್ಯಾದ ಇತರ ಭಾಗಗಳಿಗೆ ಹರಡಬಹುದು. ಇಸ್ರೇಲ್ ದೊಡ್ಡ ನಷ್ಟವನ್ನು ಎದುರಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಲೆಬನಾನ್ನ ಹಿಜ್ಬುಲ್ಲಾ ಗುಂಪು ಯುದ್ಧದ ಎಲ್ಲಾ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ ಇಸ್ರೇಲ್ ಗಾಜಾದ ಮೇಲಿನ ದಾಳಿಯನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಬೇಕು ಎಂದರು.
ಇಸ್ರೇಲ್ ಹಿಜ್ಬುಲ್ಲಾವನ್ನು ತನ್ನ ಪ್ರಮುಖ ತಕ್ಷಣದ ಬೆದರಿಕೆ ಎಂದು ಪರಿಗಣಿಸುತ್ತದೆ. ಅದು ಸುಮಾರು 150,000 ರಾಕೆಟ್ಗಳು ಮತ್ತು ಕ್ಷಿಪಣಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇಸ್ರೇಲ್ನಲ್ಲಿ ಎಲ್ಲಿ ಬೇಕಾದರೂ ಕ್ಷಿಪಣಿಗಳನ್ನು ಉಡಾಯಿಸಬಹುದು. ಸಿರಿಯಾದ 12 ವರ್ಷಗಳ ಸಂಘರ್ಷದಲ್ಲಿ ಭಾಗವಹಿಸಿದ ಸಾವಿರಾರು ತರಬೇತಿ ಪಡೆದ ಉಗ್ರರು ಮತ್ತು ವಿವಿಧ ಮಿಲಿಟರಿ ಡ್ರೋನ್ಗಳನ್ನು ಹಿಜ್ಬುಲ್ಲಾ ಹೊಂದಿದೆ.
ಹಮಾಸ್ ಉಗ್ರರ ಮಾರಣಾಂತಿಕ ದಾಳಿಯ ನಂತರ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲಿ ವೈಮಾನಿಕ ದಾಳಿ ನಡೆಸಿದ್ದು ಇಲ್ಲಿಯವರೆಗೂ 2,300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚಾಗಿ ನಾಗರೀಕರೆ ಹೆಚ್ಚಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ