'ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಜೀವ ಭಯ': ಸುರಕ್ಷಿತ ಅಡಗುತಾಣ ಸೇರಿದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ!
ಟೆಹ್ರಾನ್: ಇಸ್ರೇಲಿ ರಕ್ಷಣಾ ಪಡೆ (IDF) ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನೇ ಹೊಡೆದುರುಳಿಸಿದೆ. ಕಳೆದ ತಡರಾತ್ರಿ ಬೈರುತ್ನ ದಕ್ಷಿಣ ಉಪನಗರದಲ್ಲಿರುವ ಲೆಬನಾನಿನ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ನಸ್ರಲ್ಲಾ ಸಾವನ್ನಪ್ಪಿದ್ದು, ಇದಾದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿದೆ.
ಇನ್ನು ಹಿಜ್ಬುಲ್ಲಾ ಮುಖ್ಯಸ್ಥನನ್ನೇ ಇಸ್ರೇಲ್ (Israel) ಹೊಡೆದುರುಳಿಸಿರುವುದು ಇದೀಗ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಜೀವ ಭಯ ಶುರುವಾಗಿದೆ. ಹೀಗಾಗಿ ಖಮೇನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಹಸನ್ ನಸ್ರಲ್ಲಾ ಹತ್ಯೆಯನ್ನು ಇಸ್ರೇಲ್ ಘೋಷಿಸಿದ ನಂತರ ಮುಂದಿನ ಹಂತವನ್ನು ನಿರ್ಧರಿಸಲು ಇರಾನ್, ಹಿಜ್ಬುಲ್ಲಾ ಮತ್ತು ಇತರ ಪ್ರಾಕ್ಸಿ ಗುಂಪುಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ನಸ್ರಲ್ಲಾ ಜೊತೆಗೆ ಭಯೋತ್ಪಾದಕ ಸಂಘಟನೆಯ ಹಲವಾರು ಕಮಾಂಡರ್ಗಳು ಸಹ ಹತ್ಯೆಯಾಗಿದ್ದಾರೆ ಎಂದು ಐಡಿಎಫ್ ಹೇಳಿಕೊಂಡಿದೆ. ಇವರಲ್ಲಿ ಹಿಜ್ಬುಲ್ಲಾದ ದಕ್ಷಿಣ ಮುಂಭಾಗದ ಕಮಾಂಡರ್ ಅಲಿ ಕರ್ಕಿ ಸೇರಿದ್ದಾನೆ. ಲೆಬನಾನಿನ ಭಯೋತ್ಪಾದಕ ಗುಂಪಿನ ಪ್ರಧಾನ ಕಛೇರಿಯು ಬೈರುತ್ನ ದಕ್ಷಿಣ ಉಪನಗರವಾದ ದಹೀಹ್ನಲ್ಲಿರುವ ವಸತಿ ಕಟ್ಟಡದ ಅಡಿಯಲ್ಲಿದೆ.
ನಸ್ರಲ್ಲಾ ಹತ್ಯೆಯ ನಂತರ, IDF ಚೀಫ್ ಆಫ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ, 'ಸಂದೇಶ ಸ್ಪಷ್ಟವಾಗಿದೆ. ಇಸ್ರೇಲ್ ನಾಗರಿಕರಿಗೆ ಬೆದರಿಕೆಯೊಡ್ಡುವ ಪ್ರತಿಯೊಬ್ಬರನ್ನು ಹೇಗೆ ತಲುಪಬೇಕು ಎಂದು ನಮಗೆ ತಿಳಿದಿದೆ ಎಂದು ಹೇಳಿದರು.
ಇಸ್ರೇಲಿ ಮಾಧ್ಯಮ ವರದಿಗಳು, ನಸ್ರಲ್ಲಾಹ್ ಅವರ ಮಗಳು ಜೈನಾಬ್ ಸಹ ದಕ್ಷಿಣ ಬೈರುತ್ನಲ್ಲಿ ಹಿಜ್ಬುಲ್ಲಾ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಇದನ್ನು ಹಿಜ್ಬುಲ್ಲಾ ಅಥವಾ ಲೆಬನಾನಿನ ಮಾಧ್ಯಮಗಳಿಂದ ಯಾವುದೇ ದೃಢೀಕರಣವಿಲ್ಲ.
ಬೈರುತ್ನ ದಕ್ಷಿಣ ಉಪನಗರವಾದ ದಹೀಹ್ನಲ್ಲಿ ಶನಿವಾರ ಮುಂಜಾನೆ ಇಸ್ರೇಲ್ ದಾಳಿಗಳನ್ನು ಪುನರಾರಂಭಿಸಿದೆ. ಹಿಜ್ಬುಲ್ಲಾದ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡಿದ್ದು ಈ ದಾಳಿಯ ನಿರ್ದಿಷ್ಠ ಗುರಿ ನಾಗರಿಕ ಕಟ್ಟಡಗಳ ಅಡಿಯಲ್ಲಿ ಇರಿಸಲಾಗಿರುವ ಹೆಜ್ಬೊಲ್ಲಾದ ಶಸ್ತ್ರಾಸ್ತ್ರಗಳ ಸಂಗ್ರಹವಾಗಿದೆ ಎಂದು ಇಸ್ರೇಲಿ ಸೇನೆಯು ಹೇಳುತ್ತದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ