
ಢಾಕಾ: ಭಾರತದಿಂದ ದೂರಾಗುತ್ತಿರುವ ಬಾಂಗ್ಲಾದೇಶ ಇದೀಗ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದ್ದು, ಉಭಯ ದೇಶಗಳ ನಡುವಿನ ಸೌಹಾರ್ದ ಮಾತುಕತೆ ಮುಂದುವರೆದಿರುವಂತೆಯೇ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹೊಸ ಅಚ್ಚರಿಯ ಆಫರ್ ನೀಡಿದೆ.
ಹೌದು.. ಬರೋಬ್ಬರಿ 15 ವರ್ಷಗಳ ಬಳಿಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆದಿದ್ದು, ಈ ಸಭೆಯಲ್ಲಿ ಬಾಂಗ್ಲಾದೇಶವು ಪಾಕಿಸ್ತಾನಕ್ಕೆ ತನ್ನ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.
ಮಹಮದ್ ಯೂನುಸೇ ನೇೃತ್ವದ ಬಾಂಗ್ಲಾದೇಶ ಸರ್ಕಾರ ಪಾಕಿಸ್ತಾನಕ್ಕೆ ತನ್ನ ಸ್ನೇಹದ ಹಸ್ತ ಚಾಚಿದ್ದು, ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳ ಕುರಿತು ಚರ್ಚೆಸಲಾಗಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಕೊನೆಯ ಸಭೆ 2010 ರಲ್ಲಿ ನಡೆದಿತ್ತು.
ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಶಿಮ್ ಉದ್ದೀನ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಮ್ನಾ ಬಲೋಚ್ ಅವರ ನಡುವೆ ಗುರುವಾರ ಈ ಸಭೆ ನಡೆಯಿತು. ಸಭೆಯಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದೊಂದಿಗೆ ಐತಿಹಾಸಿಕವಾಗಿ ಬಗೆಹರಿಯದ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿತು.
'1971ಕ್ಕಾಗಿ ಸಾರ್ವಜನಿಕ ಕ್ಷಮೆ ಕೇಳಿಬಿಡಿ, ಎಲ್ಲವನ್ನೂ ಮರೆಯುತ್ತೇವೆ'
ಇದೇ ವೇಳೆ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಮತ್ತೊಂದು ಆಫರ್ ನೀಡಿದ್ದು, ಈ ಹಿಂದೆ ಅಂದರೆ 1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಎಸಗಿರುವ ದೌರ್ಜನ್ಯಗಳಿಗೆ ಪ್ರತಿಯಾಗಿ, ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಬಾಂಗ್ಲಾದೇಶವು ಪಾಕಿಸ್ತಾನವನ್ನು ಒತ್ತಾಯಿಸಿದೆ.
ಪೂರ್ವ ಪಾಕಿಸ್ತಾನವು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ಬಾಂಗ್ಲಾದೇಶ ರಾಷ್ಟ್ರವಾದಾಗ, ಪಾಕಿಸ್ತಾನ ಸೇನೆಯು ಮಾನವೀಯತೆ ಮೇಲೆ ಎಸಗಿರುವ ದೌರ್ಜನ್ಯಕ್ಕಾಗಿ ಪಾಕಿಸ್ತಾನವು ಬಾಂಗ್ಲಾದೇಶದ ಕ್ಷಮೆ ಕೋರಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಲಾಗಿದೆ. ಅಲ್ಲದೆ ಈ ಕುರಿತು ಸಾರ್ವಜನಿಕನಿಕವಾಗಿ ಪಾಕಿಸ್ತಾನ ಕ್ಷಮೆ ಕೇಳಬೇಕು. ನಾವೂ ಕೂಡ ಎಲ್ಲವನ್ನೂ ಮರೆತು ಸೌಹಾರ್ಧವಾಗಿ ಮುನ್ನಡೆಯಬಹುದು ಎಂದು ಬಾಂಗ್ಲಾದೇಶ ಹೇಳಿದೆ ಎನ್ನಲಾಗಿದೆ.
ಹಣ ಕೊಡಿ
ಈ ನಡುವೆ ಸತತ ಪ್ರತಿಭಟನೆ ಮತ್ತು ಹಿಂಸಾಚಾರಗಳಿಂದ ತತ್ತರಿಸಿ ಹೋಗಿರುವ ಬಾಂಗ್ಲಾದೇಶ ಪಾಕಿಸ್ತಾನದ ಒಟ್ಟು ಆಸ್ತಿಯಿಂದ 4.3 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಬಾಂಗ್ಲಾದೇಶಕ್ಕೆ ನೀಡುವಂತೆಯೂ ಸಭೆಯಲ್ಲಿ ಬಾಂಗ್ಲಾದೇಶದ ಅಧಿಕಾರಿಗಳು ಆಗ್ರಹಿಸಿದ್ದಾರೆ. ಬಾಂಗ್ಲಾದೇಶವು ಪಾಕಿಸ್ತಾನದಿಂದ ಬರಬೇಕಾದ 4.3 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನೂ ಕೇಳಿದೆ. ಈ ಹಣವು 1971ರಲ್ಲಿ ಪೂರ್ವ ಪಾಕಿಸ್ತಾನ ಭಾಗವು ಬಾಂಗ್ಲಾದೇಶ ದೇಶವಾದಾಗ ಹಂಚಿಕೆಯಾಗಬೇಕಿದ್ದ ಆಸ್ತಿಯ ಭಾಗವಾಗಿತ್ತು. ಇದರಲ್ಲಿ 1971 ರ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶವನ್ನು ಬಿಡಲು ಸಾಧ್ಯವಾಗದೆ ಸಿಲುಕಿಕೊಂಡಿದ್ದ ಪಾಕಿಸ್ತಾನಿಗಳ ಮರಳುವಿಕೆ ಮತ್ತು 1970 ರ ಭೋಲಾ ಚಂಡಮಾರುತಕ್ಕೆ ವಿದೇಶಿ ನೆರವಿನ ರೂಪದಲ್ಲಿ ಪಡೆದ ಹಣವೂ ಸೇರಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿರುವ ಜಶಿಮ್ ಉದ್ದೀನ್, "ನಾವು ಪಾಕಿಸ್ತಾನದೊಂದಿಗೆ ಐತಿಹಾಸಿಕವಾಗಿ ಬಗೆಹರಿಯದ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇವೆ" ಎಂದು ಹೇಳಿದ್ದಾರೆ. ಮುಂದುವರೆದು, "ಈ ಸಮಸ್ಯೆಗಳ ಪಟ್ಟಿಯಲ್ಲಿ 1970ರ ಚಂಡಮಾರುತದ ಸಂತ್ರಸ್ತರಿಗೆ ಕಳುಹಿಸಿದ ವಿದೇಶಿ ಸಹಾಯದ ಹಣವನ್ನು ವರ್ಗಾಯಿಸುವುದು ಮತ್ತು 1971ರಲ್ಲಿ ಪಾಕಿಸ್ತಾನಿ ಸೈನ್ಯವು ನಡೆಸಿದ ನರಮೇಧಕ್ಕೆ ಅಧಿಕೃತವಾಗಿ ಕ್ಷಮೆ ಕೇಳುವುದು ಸೇರಿವೆ" ಎಂದು ಜಶಿಮ್ ಉದ್ದೀನ್ ಸ್ಪಷ್ಟಪಡಿಸಿದ್ದಾರೆ.
ಐತಿಹಾಸಿಕ ಸಮಸ್ಯೆಗಳನ್ನು ಸರಿಪಡಿಸಲು ಇದು ಸಕಾಲ ಎಂದಿರುವ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ, "ಪರಸ್ಪರ ಲಾಭ ಮತ್ತು ಹಿತಾಸಕ್ತಿಗಾಗಿ ಸಂಬಂಧವನ್ನು ಗಟ್ಟಿಗೊಳಿಸಲು ಈ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ. ಪಾಕಿಸ್ತಾನವು ಈ ಬೇಡಿಕೆಗಳ ಬಗ್ಗೆ ಭವಿಷ್ಯದಲ್ಲಿ ಸಕರಾತ್ಮಕವಾಗಿ ಪ್ರತಿಕ್ರಿಯಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಭೆಯ ಬಳಿಕ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಮ್ನಾ ಬಲೋಚ್ ಅವರು, ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು, ಏಪ್ರಿಲ್ 27 ಮತ್ತು 28ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
Advertisement