
ಟೆಲ್ ಅವೀವ್: ಇಸ್ರೇಲ್ ನಲ್ಲಿ ಮತ್ತೆ ಹೌತಿ ಬಂಡುಕೋರರ ಅಟ್ಟಹಾಸ ಮೆರೆದಿದ್ದು ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರತೀಕಾರದ ಶಪಥ ಮಾಡಿದ್ದಾರೆ.
ಹೌದು.. ಯೆಮೆನ್ನ ಹೌತಿ ಬಂಡುಕೋರರು ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿ ನಡೆಸಿದ ನಂತರ, ಪ್ರಧಾನಿ ನೆತನ್ಯಾಹು ಈ ದಾಳಿಯು ದೊಡ್ಡ ಪ್ರತೀಕಾರಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ರತಿಕ್ರಿಯೆ ಒಮ್ಮೆ ಮಾತ್ರ ಅಲ್ಲ, ನಿರಂತರ ದಾಳಿಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ಬೆನ್ ಗುರಿಯನ್ ವಿಮಾನ ನಿಲ್ದಾಣದ ಬಳಿ ನಡೆದ ಕ್ಷಿಪಣಿ ದಾಳಿಯಲ್ಲಿ ಎಂಟು ನಾಗರಿಕರು ಗಾಯಗೊಂಡು, ಕೆಲ ಸಮಯದ ಕಾಲ ಇಡೀ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಆಗಿತ್ತು. ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯು ದಾಳಿಯನ್ನು ತಡೆಯಲು ವಿಫಲವಾಗಿದೆ, ಇದು ಭದ್ರತಾ ವ್ಯವಸ್ಥೆಯ ಪರಿಶೀಲನೆಗೆ ಕಾರಣವಾಗಿದೆ.
ಇದರ ನಡುವೆಯೇ ಯೆಮೆನ್ನ ಹೌತಿ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. 'ದಾಳಿಯಲ್ಲಿ ಕ್ಷಿಪಣಿ ಇಸ್ರೇಲ್ನ ಪ್ರಮುಖ ವಿಮಾನ ನಿಲ್ದಾಣವಾದ ಬೆನ್ ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿದ್ದಿತು.
ಈ ಪ್ರತೀಕಾರ ಒಮ್ಮೆಗೇ ಕೊನೆಗೊಳ್ಳುವುದಿಲ್ಲ. ನಾವು ನಿರಂತರವಾಗಿ ದಾಳಿ ಮಾಡುತ್ತೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ನೇತನ್ಯಾಹು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಿಂದ ಬಿಡುಗಡೆಯಾದ ವೀಡಿಯೊದಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಯೆಮೆನ್ನಲ್ಲಿನ ಹೌತಿ ಬಂಡುಕೋರರ ವಿರುದ್ಧ ಈ ಹಿಂದೆ ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ ನೆತನ್ಯಾಹು, 'ಈ ಪ್ರಕ್ರಿಯೆಯು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂದು ಹೇಳಿದರು. ಅಮೆರಿಕದ ಸಹಯೋಗದೊಂದಿಗೆ ನಡೆಯುತ್ತಿರುವ ಮಿಲಿಟರಿ ಪ್ರಯತ್ನಗಳನ್ನು ಅವರು ದೃಢಪಡಿಸಿದರು. ಇದು ಒಂದು ದಿನದ ಕ್ರಮವಲ್ಲ, ಆದರೆ ಇಸ್ರೇಲ್ ತನ್ನ ಶತ್ರುಗಳನ್ನು ಮೌನವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ನೆತನ್ಯಾಹು ಎಚ್ಚರಿಸಿದರು.
ಶತ್ರುಗಳಿಗೆ ಏಳು ಪಟ್ಟು ಉತ್ತರ ಸಿಗುತ್ತದೆ: ರಕ್ಷಣಾ ಸಚಿವ
ಇದೇ ವೇಳೆ ಮಾತನಾಡಿರುವ ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕೂಡ ಈ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, 'ಇಸ್ರೇಲ್ ತನ್ನ ನಾಗರಿಕರು ಮತ್ತು ಗಡಿಗಳನ್ನು ರಕ್ಷಿಸಲು ಯಾವುದೇ ಮಟ್ಟಕ್ಕೆ ಹೋಗಬಹುದು. ನಮಗೆ ಹಾನಿ ಮಾಡುವವರಿಗೆ ನಾವು ಏಳು ಪಟ್ಟು ಹಾನಿ ಮಾಡುತ್ತೇವೆ ಎಂದು ಅವರು ಹೇಳಿದರು.
Advertisement