
ಇಸ್ಲಾಮಾಬಾದ್: ಸಿಂಧೂ ನದಿಯ ನೀರನ್ನು ನಿಲ್ಲಿಸಿದರೆ ರಕ್ತ ಹರಿಯುತ್ತದೆ ಎಂಬ ರೋಷವೇಷದ ಮಾತುಗಳನ್ನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP)ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಈಗ ಭಾರತದೊಂದಿಗೆ ಶಾಂತಿಯನ್ನು ಕೋರಿದ್ದಾರೆ, ಪಾಕಿಸ್ತಾನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಬದ್ಧವಾಗಿದೆ. ಆದರೆ ಸಂಘರ್ಷಕ್ಕಾಗಿ ಅಲ್ಲ ಎಂದು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
ಮಂಗಳವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಜರ್ದಾರಿ, ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶುವಾಗಿದ್ದು, ಭಯೋತ್ಪಾದನೆಯನ್ನು ರಫ್ತು ಮಾಡುವುದಿಲ್ಲ. ಭಾರತ ಶಾಂತಿಯ ಹಾದಿಯಲ್ಲಿ ನಡೆಯಲು ಬಯಸಿದರೆ, ಅವರು ಮುಷ್ಟಿಯನ್ನು ಬಿಗಿಗೊಳಿಸದೆ ಮುಕ್ತಹಸ್ತದಿಂದ ಬರಲಿ, ಸತ್ಯ ಅಥವಾ ಕಟ್ಟುಕಥೆಗಳೊಂದಿಗೆ ಬರಲಿ, ನಾವು ನೆರೆಹೊರೆಯವರಾಗಿ ಕುಳಿತು ಸತ್ಯವನ್ನು ಮಾತನಾಡೋಣ ಎಂದು ಹೇಳಿದ್ದಾರೆ.
ಭಾರತದವರು ಹಾಗೆ ಮಾಡದಿದ್ದರೆ ಪಾಕಿಸ್ತಾನದ ಜನರು ಮಂಡಿಯೂರಲು ಬಿಡುವುದಿಲ್ಲ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಪಾಕಿಸ್ತಾನದ ಜನರು ಹೋರಾಡುವ ಸಂಕಲ್ಪವನ್ನು ಹೊಂದಿದ್ದಾರೆ, ನಾವು ಸಂಘರ್ಷವನ್ನು ಪ್ರೀತಿಸುವುದಿಲ್ಲ, ಸ್ವಾತಂತ್ರ್ಯವನ್ನು ಪ್ರೀತಿಸುತ್ತೇವೆ" ಎಂದು ಅವರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
ಇದಕ್ಕೂ ಮುನ್ನ ಏಪ್ರಿಲ್ 25 ರಂದು ಸುಕ್ಕೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜರ್ದಾರಿ, ಸಿಂಧೂ ನದಿ ನೀರು ನಿಲ್ಲಿಸಿದ್ದರೆ ರಕ್ತ ಹರಿಯುತ್ತದೆ. ಪಾಕಿಸ್ತಾನದ ಜನರು ಅಥವಾ ಅಂತಾರಾಷ್ಟ್ರೀಯ ಸಮುದಾಯವು ಮೋದಿಯವರ ಯುದ್ಧೋದ್ರೇಕ ಅಥವಾ ಸಿಂಧೂ ನದಿ ನೀರನ್ನು ಪಾಕಿಸ್ತಾನದಿಂದ ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನಗಳನ್ನು ಸಹಿಸುವುದಿಲ್ಲ. ಸಿಂಧೂ ನದಿಯ ದರೋಡೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಸಂದೇಶವನ್ನು ನಾವು ಜಗತ್ತಿಗೆ ಸಾರುತ್ತೇವೆ. ಭಾರತದ ಆಕ್ರಮಣದಿಂದ ತಮ್ಮ ನದಿಯನ್ನು ರಕ್ಷಿಸಿಕೊಳ್ಳಲು ದೃಢನಿಶ್ಚಯದ ಹೋರಾಟಕ್ಕೆ ಸಿದ್ಧರಾಗುವಂತೆ ಬಿಲಾವಲ್ ಭುಟ್ಟೋ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ 25 ಭಾರತೀಯ ಪ್ರಜೆಗಳು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಬಲಿ ತೆಗೆದುಕೊಂಡ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ವತೆ ಹೆಚ್ಚಾಗಿರುವಂತೆಯೇ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ರೀತಿಯಲ್ಲಿ ಬಿಲಾವಲ್ ಭುಟ್ಟೋ ಹೇಳಿಕೆ ನೀಡಿದ್ದಾರೆ.
Advertisement