

ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷಕ್ಕೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ವ್ಯಕ್ತವಾಗಿ, ಇದರಿಂದ ತಾತ್ಕಾಲಿಕ ಶಾಂತಿಯ ವಾತಾವರಣ ನಿರ್ಮಾಣವಾಗಿದೆಯಾದರೂ, ಇದು ಯುದ್ಧದ ಅಂತ್ಯವಲ್ಲ ಎಂದು ಇರಾನ್ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಸ್ಪಷ್ಟಪಡಿಸಿದ್ದಾರೆ.
2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ನಂತರ ಇರಾನ್ ನೀಡಿರುವ ಹೇಳಿಕೆ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ. ಎರಡು ವಾರಗಳ ಕಾಲ ದಾಳಿ ನಿಲ್ಲಿಸುವುದು ಕೇವಲ ತಾತ್ಕಾಲಿಕ ತಂತ್ರ ಮಾತ್ರ, ಅಂತಿಮ ಸಮಸ್ಯೆಗಳು ಇನ್ನೂ ಇತ್ಯರ್ಥಗೊಂಡಿಲ್ಲ ಎಂದು ಹೇಳಿದ್ದಾರೆ.
ಇರಾನ್ನ ಎಲ್ಲಾ ಮಿಲಿಟರಿ ಘಟಕಗಳು ತಕ್ಷಣವೇ ದಾಳಿಯನ್ನು ನಿಲ್ಲಿಸಬೇಕು. ಆದರೆ, ಇದು ಯುದ್ಧದ ಅಂತ್ಯವಲ್ಲ."ಶತ್ರುಗಳ ಮೇಲೆ ನಿಗಾ ಇರಲಿ ಮತ್ತು ಕೈಗಳು ಟ್ರಿಗ್ಗರ್ ಮೇಲಿರಲಿ" ಎನ್ನುವ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ಯುದ್ಧಕ್ಕೆ ಸನ್ನದ್ಧರಾಗಿರಿ ಎಂದು ಸಂದೇಶ ನೀಡಿದ್ದಾರೆ.
ಇರಾನ್ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೆ ನೀಡಿ, ಅಮೆರಿಕ ಜೊತೆಗಿನ ಮಾತುಕತೆಗಳ ಅರ್ಥ ನಮ್ಮ ನೆಲದ ಮೇಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಎಂದಲ್ಲ. ಇದು ಯುದ್ಧದ ಅಂತ್ಯವಲ್ಲ, ನಮ್ಮ ಮೇಲೆ ಯಾವುದೇ ದಾಳಿಗೆ ಮುಂದಾದರೆ ನಾವು ಪೂರ್ಣ ಪ್ರತಿಕ್ರಿಯೆಯೊಂದಿಗೆ ಪ್ರತಿಕ್ರಿಯಿಸುತ್ತೇವೆಂದು ಹೇಳಿದೆ.
ಇರಾನ್ ರಾಷ್ಟ್ರದ ವಿರುದ್ಧ ಅನ್ಯಾಯದ, ಕಾನೂನುಬಾಹಿರ ಮತ್ತು ಕ್ರಿಮಿನಲ್ ಯುದ್ಧ ಎಂದು ಕರೆದ ಅಮೆರಿಕಕ್ಕೆ ಇದು "ಹೀನಾಯ ಸೋಲು" ಎಂದು ಬಣ್ಣಿಸಿದೆ.
ಈ ಮಾತುಕತೆಗಳು ಅಮೆರಿಕದ ಕಡೆಯ ಸಂಪೂರ್ಣ ಅಪನಂಬಿಕೆಯೊಂದಿಗೆ ಇಸ್ಲಾಮಾಬಾದ್ನಲ್ಲಿ ಪ್ರಾರಂಭವಾಗುತ್ತವೆ ಮತ್ತು ಇರಾನ್ ಈ ಮಾತುಕತೆಗಳಿಗೆ ಎರಡು ವಾರಗಳನ್ನು ನಿಗದಿಪಡಿಸುತ್ತದೆ. ಒಪ್ಪಂದದ ಮೂಲಕ ಈ ಸಮಯವನ್ನು ವಿಸ್ತರಿಸಬಹುದು. ಈ ಅವಧಿಯಲ್ಲಿ ಸಂಪೂರ್ಣ ರಾಷ್ಟ್ರೀಯ ಏಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ವಿಜಯೋತ್ಸವದ ಆಚರಣೆಗಳನ್ನು ಬಲದಿಂದ ಮುಂದುವರಿಸುವುದು ಅವಶ್ಯಕ.
'ರಾಷ್ಟ್ರೀಯ ಮಾತುಕತೆಗಳು ಮತ್ತು ಕ್ಷೇತ್ರದ ಮುಂದುವರಿಕೆಯಾಗಿದ್ದು, ಎಲ್ಲಾ ಜನರು, ಗಣ್ಯರು ಮತ್ತು ರಾಜಕೀಯ ನಾಯಕರು ಮತ್ತು ವ್ಯವಸ್ಥೆಯ ಉನ್ನತ ಮಟ್ಟದ ಮೇಲ್ವಿಚಾರಣೆಯಲ್ಲಿರುವ ಈ ಪ್ರಕ್ರಿಯೆಯನ್ನ ಬೆಂಬಲಿಸಬೇಕು. ಯಾವುದೇ ವಿಭಜಕ ಹೇಳಿಕೆಗಳನ್ನು ನೀಡದಿರುವು ಉತ್ತಮ. ಯುದ್ಧಭೂಮಿಯಲ್ಲಿ ಶತ್ರುಗಳ ಶರಣಾಗತಿಯು ಮಾತುಕತೆಗಳಲ್ಲಿ ನಿರ್ಣಾಯಕ ರಾಜಕೀಯ ಸಾಧನೆಯಾದರೆ, ನಾವು ಈ ಮಹಾನ್ ಐತಿಹಾಸಿಕ ವಿಜಯವನ್ನು ಒಟ್ಟಾಗಿ ಆಚರಿಸುತ್ತೇವೆ, ಇಲ್ಲದಿದ್ದರೆ ಇರಾನ್ ರಾಷ್ಟ್ರದ ಎಲ್ಲಾ ಬೇಡಿಕೆಗಳನ್ನು ಸಾಧಿಸುವವರೆಗೆ ಯುದ್ಧಭೂಮಿಯಲ್ಲಿ ಹೋರಾಡುತ್ತೇವೆಂದು ಹೇಳಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಈ ವಿರಾಮ ಒಪ್ಪಂದದಲ್ಲಿ ಉಭಯ ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕಡಿಮೆ ಮಾಡಲು ಇದು ಮೊದಲ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗುತ್ತಿದೆ.
ವಿಶೇಷವಾಗಿ ಸಮುದ್ರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಣಿಕೆ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸುವುದೂ ಈ ಒಪ್ಪಂದದ ಪ್ರಮುಖ ಅಂಶವಾಗಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ಮುಂದುವರಿದಿದ್ದು, ಎರಡೂ ದೇಶಗಳ ನಡುವಿನ ಔಪಚಾರಿಕ ಮಾತುಕತೆಗಳು ಏಪ್ರಿಲ್ 10 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿದೆ.
ಈ ನಡುವೆ ವಿಶ್ವಸಂಸ್ಥೆಯ ಪ್ರತಿನಿಧಿ ಕೂಡ ಇರಾನ್ಗೆ ಭೇಟಿ ನೀಡಿ ಶಾಂತಿ ಮಾತುಕತೆಗಳಿಗೆ ಬಲ ನೀಡುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ನೋಡಿದರೆ, ಈ ಎರಡು ವಾರಗಳ ವಿರಾಮ ಯುದ್ಧದ ಅಂತ್ಯವಲ್ಲ. ಆದರೆ, ಮುಂದಿನ ರಾಜತಾಂತ್ರಿಕ ಪರಿಹಾರಕ್ಕೆ ಒಂದು ಅವಕಾಶ ಮಾತ್ರ ಎಂಬುದಾಗಿ ಇರಾನ್ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ನಡೆಯುವ ಮಾತುಕತೆಗಳು ಈ ಸಂಘರ್ಷದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸಲಿವೆ.
Advertisement