ನೇಪಾಳ ದುರಂತಕ್ಕೆ 5 ತಿಂಗಳ ಹಿಂದೆಯೇ ಎಚ್ಚರಿಕೆ; ಹಿಮನದಿಗಳ ಕರಗುವಿಕೆ ಕುರಿತು ಬೆಚ್ಚಿಬೀಳಿಸುವ ವರದಿ

ಹಿಂದೂ ಕುಶ್‌ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಹಿಂದೆಂದಿಗಿಂತಲೂ ವೇಗವಾಗಿ ಕರಗುತ್ತಿದ್ದು, ಹಿಮನಷ್ಟದ ಪ್ರಮಾಣ ಸಹಸ್ರಮಾನದ ಆರಂಭದಿಂದ ದ್ವಿಗುಣಗೊಂಡಿದೆ..
5 Months Before Nepal Disaster, Two Reports Indicated What Lay Ahead
ನೇಪಾಳ ಪ್ರವಾಹ
Updated on

ನವದೆಹಲಿ: ನೇಪಾಳದಲ್ಲಿ ಕೆಲವೇ ದಿನಗಳ ಹಿಂದೆ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ 272 ಮಂದಿ ಬಲಿಯಾಗಿರುವ ಬೆನ್ನಲ್ಲೇ, ಈ ದುರಂತದ ಬಗ್ಗೆ ಐದು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು ಎಂಬ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.

ಹಿಂದೂ ಕುಶ್‌ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಹಿಂದೆಂದಿಗಿಂತಲೂ ವೇಗವಾಗಿ ಕರಗುತ್ತಿದ್ದು, ಹಿಮನಷ್ಟದ ಪ್ರಮಾಣ ಸಹಸ್ರಮಾನದ ಆರಂಭದಿಂದ ದ್ವಿಗುಣಗೊಂಡಿದೆ ಎಂದು ಎರಡು ವರದಿಗಳು ಎಚ್ಚರಿಸಿದ್ದವು.

ಹಿಂದೂ ಕುಶ್‌ ಹಿಮಾಲಯ ಪ್ರದೇಶದ ಜನರ ಪರವಾಗಿ ಕಾರ್ಯನಿರ್ವಹಿಸುವ ಅಂತರ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಇಂಟಿಗ್ರೇಟೆಡ್‌ ಮೌಂಟನ್‌ ಡೆವಲಪ್‌ಮೆಂಟ್‌ (ICIMOD) ಮಾರ್ಚ್‌ನಲ್ಲಿ ಈ ಎರಡು ವರದಿಗಳನ್ನು ಪ್ರಕಟಿಸಿತ್ತು ಎನ್ನಲಾಗಿದೆ.

ಕಠ್ಮಂಡುವಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ICIMODನ ಪ್ರಾದೇಶಿಕ ಸದಸ್ಯ ರಾಷ್ಟ್ರಗಳಲ್ಲಿ ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ಸೇರಿದಂತೆ ಹಲವು ದೇಶಗಳಿವೆ. 1975ರಿಂದೀಚೆಗೆ ಕೆಲವು ಪ್ರದೇಶಗಳಲ್ಲಿ ಹಿಮನದಿಗಳ ಹಿಮದ ದಪ್ಪ 27 ಮೀಟರ್‌ವರೆಗೆ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿದ್ದವು.

ಮುಂದಿನ ದಿನಗಳಲ್ಲಿ ಏಷ್ಯಾದ ‘ವಾಟರ್ ಟವರ್ಸ್‌’ ಎಂದು ಕರೆಯಲಾಗುವ ಹಿಮಾಲಯದ ಹಿಮನದಿಗಳ ಕರಗುವ ನೀರನ್ನು ಅವಲಂಬಿಸಿರುವ ಸುಮಾರು 200 ಕೋಟಿ ಜನರ ಬದುಕಿಗೆ ಗಂಭೀರ ಅಪಾಯ ಎದುರಾಗಬಹುದು ಎಂದು ವರದಿಗಳು ಎಚ್ಚರಿಕೆ ನೀಡಿದ್ದವು.

5 Months Before Nepal Disaster, Two Reports Indicated What Lay Ahead
Nepal floods: ಮೃತರ ಸಂಖ್ಯೆ 675ಕ್ಕೆ ಏರಿಕೆ; ರಾಸುವಾ ಜಲವಿದ್ಯುತ್ ಯೋಜನೆ ಸ್ಥಳದಿಂದ ನಾಲ್ವರು ಭಾರತೀಯರ ರಕ್ಷಣೆ!

4,000 ಮೀಟರ್‌ ಎತ್ತರದಲ್ಲೂ ಹಿಮವಲ್ಲ, ಮಳೆ!

ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ ನಿಖರವಾಗಿ ಕಾರಣವೇನು ಎಂಬುದನ್ನು ವಿಜ್ಞಾನಿಗಳು ಮತ್ತು ಸಂಶೋಧಕರು ಇನ್ನೂ ಪರಿಶೀಲಿಸುತ್ತಿದ್ದಾರೆ. ಆದರೆ ಹಲವು ತಜ್ಞರು ಇದಕ್ಕೆ ಹಲವಾರು ಅಂಶಗಳ ಸಂಯೋಜನೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಅತ್ಯಂತ ಆತಂಕಕಾರಿ ಅಂಶವೆಂದರೆ, 4,000 ಮೀಟರ್‌ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲೂ ಹಿಮಪಾತದ ಬದಲು ಮಳೆಯಾಗುತ್ತಿರುವುದು.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಡೆಹ್ರಾಡೂನ್‌ನ ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯಾಲಜಿಯ ವಿಜ್ಞಾನಿಯೊಬ್ಬರು ಗುರುವಾರ ಮಾತನಾಡಿ, ಹಿಂದೆ ಹಿಮಪಾತವಾಗುತ್ತಿದ್ದ ಇಂತಹ ಎತ್ತರ ಪ್ರದೇಶಗಳಲ್ಲಿ ಇದೀಗ ಮಳೆಯಾಗುತ್ತಿರುವುದಕ್ಕೆ ತಾಪಮಾನ ಏರಿಕೆಯೇ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಹಿಮನದಿಗಳು ವೇಗವಾಗಿ ಹಿಮ್ಮೆಟ್ಟುತ್ತಿರುವುದಕ್ಕೂ ಇದೇ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

1990ರಿಂದ 2020ರವರೆಗೆ ಶೇ.12ರಷ್ಟು ಹಿಮನದಿ ಪ್ರದೇಶ ನಷ್ಟ

ಮಾರ್ಚ್‌ನಲ್ಲಿ ಪ್ರಕಟವಾದ ICIMODನ ಎರಡು ವರದಿಗಳ ಪ್ರಕಾರ, 1990ರಿಂದ 2020ರ ಅವಧಿಯಲ್ಲಿ ಹಿಂದೂ ಕುಶ್‌ ಹಿಮಾಲಯದ ಹಿಮನದಿಗಳು ತಮ್ಮ ಒಟ್ಟು ವಿಸ್ತೀರ್ಣದ ಸುಮಾರು ಶೇ.12ರಷ್ಟು ಹಾಗೂ ಅಂದಾಜು ಹಿಮ ಸಂಗ್ರಹದ ಶೇ.9ರಷ್ಟು ಕಳೆದುಕೊಂಡಿವೆ.

‘HKH Glacier Outlook 2026’ ಎಂಬ ವರದಿಯು 38 ಹಿಮನದಿಗಳ ಮೇಲಿನ ನಿಗಾ ದತ್ತಾಂಶವನ್ನು ವಿಶ್ಲೇಷಿಸಿದೆ. 2000ನೇ ಇಸವಿಯ ನಂತರ ಹಿಮನದಿಗಳ ಕರಗುವಿಕೆ ಮತ್ತು ಹಿಮನಷ್ಟದ ಪ್ರಮಾಣ ದ್ವಿಗುಣಗೊಂಡಿರುವುದು ಇದರಲ್ಲಿ ಕಂಡುಬಂದಿದೆ.

ಇದು ಹಿಮಾಲಯದ ಹಿಮಗೋಳದ ಕೆಲವು ಭಾಗಗಳು ಹಿಂತಿರುಗಿಸಲಾಗದ ರೀತಿಯಲ್ಲಿ ಹಿಮನದಿಗಳು ಕುಗ್ಗುವ ನಿರ್ಣಾಯಕ ಹಂತದತ್ತ ಸಾಗುತ್ತಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ವರದಿ ಎಚ್ಚರಿಸಿದೆ. ಆದರೆ, ಹಿಮನದಿಗಳ ಮೇಲಿನ ನಿಗಾದಲ್ಲಿ ದೊಡ್ಡ ಪ್ರಮಾಣದ ಮಾಹಿತಿ ಕೊರತೆಯೂ ಇದೆ.

ನಿಗಾದಲ್ಲಿರುವ 38 ಹಿಮನದಿಗಳ ಪೈಕಿ ಕೇವಲ ಏಳು ಹಿಮನದಿಗಳು ಮಾತ್ರ ವಿಶ್ವ ಹಿಮನದಿ ನಿಗಾ ಸೇವೆ (WGMS) ನಿಗದಿಪಡಿಸಿರುವ ಜಾಗತಿಕ ಮಾನದಂಡಗಳನ್ನು ಪೂರೈಸಿವೆ. ಕರಾಕೋರಂ, ಸಿಕ್ಕಿಂ, ಜಾನ್ಸ್ಕರ್‌ ಮತ್ತು ಭೂತಾನ್‌ನಂತಹ ಬೃಹತ್ ಹಿಮನದಿ ಪ್ರದೇಶಗಳ ಬಗ್ಗೆ ಸಮರ್ಪಕ ನಿಗಾ ವ್ಯವಸ್ಥೆ ಇನ್ನೂ ಇಲ್ಲ ಎಂದು ವರದಿ ತಿಳಿಸಿದೆ.

5 Months Before Nepal Disaster, Two Reports Indicated What Lay Ahead
ನೇಪಾಳ ಪ್ರವಾಹದ ರೌದ್ರಾವತಾರ; 5ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 734ಕ್ಕೆ ಏರಿಕೆ, 2,498 ಮಂದಿ ನಾಪತ್ತೆ..!

ಹಿಮ-ಬಂಡೆ ಕುಸಿತದಿಂದಲೇ ಪ್ರವಾಹವೇ?

ನೇಪಾಳದ ಇತ್ತೀಚಿನ ಪ್ರವಾಹಕ್ಕೆ ಎತ್ತರದ ಪ್ರದೇಶದಿಂದ ಸಂಭವಿಸಿದ ಹಿಮ-ಬಂಡೆ ಕುಸಿತ ಕಾರಣವಾಗಿರಬಹುದೇ ಎಂಬುದನ್ನೂ ICIMOD ಸಂಶೋಧಕರು ಪರಿಶೀಲಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಹಿಮ ಮತ್ತು ಬಂಡೆ ಅವಶೇಷಗಳು ಭೋಟೆ ಕೋಶಿ ನದಿಯ ಉಪನದಿಯಾದ ಲೆಂಡೆ ಖೋಲಾಗೆ ಬಿದ್ದಿರಬಹುದು. ಇದರಿಂದ ನೀರು, ಮಣ್ಣು, ಕೆಸರು ಮತ್ತು ಬಂಡೆಗಳನ್ನು ಹೊತ್ತೊಯ್ಯುವ ಭಾರಿ ನೀರಿನ ಪ್ರವಾಹ ಏಕಾಏಕಿ ಕೆಳಭಾಗದತ್ತ ಹರಿದಿರಬಹುದು ಎಂದು ಸಂಶೋಧಕರು ಶಂಕಿಸಿದ್ದಾರೆ.

ICIMODನ ಹಿರಿಯ ಹಿಮಗೋಳ ತಜ್ಞ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಇಂದೋರ್‌ನ ಸಹ ಪ್ರಾಧ್ಯಾಪಕ ಮೊಹಮ್ಮದ್ ಫಾರೂಕ್‌ ಆಜಂ ಅವರು PTI ಜೊತೆ ಮಾತನಾಡಿ, ಹವಾಮಾನ ಬದಲಾವಣೆಯೊಂದಿಗೆ ಈ ಬೆಳವಣಿಗೆಗೆ ಸಂಬಂಧವಿದೆ ಎಂದು ಹೇಳಿದ್ದಾರೆ.

“ಹಿಮದ ಹೊದಿಕೆ ಕಡಿಮೆಯಾಗುತ್ತಿದೆ, ಹಿಮನದಿಗಳು ಹಿಮ್ಮೆಟ್ಟುತ್ತಿವೆ. ಇದರಿಂದ ಹೆಚ್ಚು ಬಂಡೆ ಪ್ರದೇಶಗಳು ಮತ್ತು ಬರಡು ಭೂಭಾಗಗಳು ಹೊರಗೆ ಕಾಣಿಸಿಕೊಳ್ಳುತ್ತಿವೆ. ಇವು ಹೆಚ್ಚು ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ಬೆಟ್ಟದ ಇಳಿಜಾರುಗಳು ಮತ್ತಷ್ಟು ದುರ್ಬಲವಾಗುತ್ತವೆ” ಎಂದು ಅವರು ತಿಳಿಸಿದ್ದಾರೆ.

ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲವಾದರೂ, ಹಿಮನದಿಗಳ ಹಿಮ್ಮೆಟ್ಟುವಿಕೆ ಹಾಗೂ ಪರ್ಮಾಫ್ರಾಸ್ಟ್‌ ಕರಗುವಿಕೆಯಿಂದ ಹಿಮದ ಹೊದಿಕೆ ಕಡಿಮೆಯಾಗುತ್ತಿರುವುದು ಪ್ರಮುಖ ಕಾರಣವಾಗಿರಬಹುದು ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೋಟ್ಯಂತರ ಜನರ ಬದುಕಿಗೆ ಆಧಾರವಾಗಿರುವ ಹಿಮಾಲಯ

ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ ಭೂಮಿಯ ಮೇಲಿನ ಅತಿ ದೊಡ್ಡ ಪ್ರಮಾಣದ ಹಿಮ ಸಂಗ್ರಹ ಹಿಂದೂ ಕುಶ್‌ ಹಿಮಾಲಯದಲ್ಲಿದೆ. ICIMOD ಪ್ರಕಾರ, ಈ ಪ್ರದೇಶದಲ್ಲಿ 63,700ಕ್ಕೂ ಹೆಚ್ಚು ಹಿಮನದಿಗಳು ಇದ್ದು, ಅವು 55,000 ಚದರ ಕಿಲೋಮೀಟರ್‌ಗೂ ಅಧಿಕ ಪ್ರದೇಶದಲ್ಲಿ ಹರಡಿಕೊಂಡಿವೆ. ಈ ಹಿಮನದಿಗಳಿಂದ ಏಷ್ಯಾದ 10 ಪ್ರಮುಖ ನದಿ ವ್ಯವಸ್ಥೆಗಳು ಹುಟ್ಟುತ್ತವೆ. ಇವು ಕೋಟ್ಯಂತರ ಜನರಿಗೆ ಆಹಾರ, ನೀರು, ಇಂಧನ ಮತ್ತು ಜೀವನೋಪಾಯದ ಭದ್ರತೆಯನ್ನು ಒದಗಿಸುತ್ತವೆ.

4,500ರಿಂದ 6,000 ಮೀಟರ್‌ ಎತ್ತರದ ನಡುವೆ ಇರುವ ಹಿಮನದಿ ಪ್ರದೇಶದ ಕನಿಷ್ಠ ಶೇ.78ರಷ್ಟು ಭಾಗವು ಎತ್ತರಕ್ಕೆ ಅನುಗುಣವಾಗಿ ಹೆಚ್ಚುತ್ತಿರುವ ತಾಪಮಾನಕ್ಕೆ ತೀವ್ರವಾಗಿ ಒಡ್ಡಿಕೊಂಡಿದೆ ಎಂದು ICIMOD ಮಾರ್ಚ್‌ನಲ್ಲಿ ಪ್ರಕಟಿಸಿದ ವರದಿಗಳಲ್ಲಿ ತಿಳಿಸಿತ್ತು. ‘Changing Dynamics of Glaciers in the Hindu Kush Himalaya Region from 1990 to 2020’ ಮತ್ತು ‘HKH Glacier Outlook 2026: Insights from 50 Years of Himalayan Glacier Monitoring’ ಎಂಬ ಎರಡು ವರದಿಗಳು ಹಿಮಾಲಯದಲ್ಲಿ ನಡೆಯುತ್ತಿರುವ ಈ ಆತಂಕಕಾರಿ ಬದಲಾವಣೆಗಳನ್ನು ದಾಖಲಿಸಿವೆ.

ಹಿಮನದಿಗಳ ನಷ್ಟ ಎಲ್ಲೆಡೆ ಒಂದೇ ರೀತಿಯಲ್ಲಿಲ್ಲ. ಪೂರ್ವದ ಹೆಂಗ್‌ಡುಯಾನ್‌ ಶಾನ್‌ ಪರ್ವತ ಪ್ರದೇಶದಲ್ಲಿ ಮೂರು ದಶಕಗಳಲ್ಲಿ ಕೆಲವು ಕಡೆ ಹಿಮನದಿ ಪ್ರದೇಶದ ಶೇ.33ರವರೆಗೆ ನಷ್ಟವಾಗಿದೆ. ಆದರೆ ಒಟ್ಟಾರೆ ವಿಸ್ತೀರ್ಣದ ದೃಷ್ಟಿಯಿಂದ ಅತಿ ದೊಡ್ಡ ನಷ್ಟವು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಈ ಪ್ರದೇಶದಲ್ಲೇ ಹಿಂದೂ ಕುಶ್‌ ಹಿಮಾಲಯದ ಶೇ.74ಕ್ಕೂ ಹೆಚ್ಚು ಹಿಮನದಿಗಳು ಇರುವುದರಿಂದ, ಅವುಗಳ ಭವಿಷ್ಯದ ಬಗ್ಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com