

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಸಂಸತ್ ಚುನಾವಣೆಗೆ ಕೇವಲ 3 ದಿನ ಬಾಕಿ ಇರುವಂತೆ ಹಿಂದೂ ಉದ್ಯಮಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಫೆಬ್ರವರಿ 9ರ ರಾತ್ರಿ ಬಾಂಗ್ಲಾದೇಶದಲ್ಲಿ ಅಪರಿಚಿತ ದಾಳಿಕೋರರು ಹಿಂದೂ ಉದ್ಯಮಿಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ಉದ್ಯಮಿಯನ್ನು 62 ವರ್ಷದ ಸುಶೇನ್ ಚಂದ್ರ ಸರ್ಕಾರ್ ಎಂದು ಗುರುತಿಸಲಾಗಿದೆ.
ಸುಶೇನ್ ಚಂದ್ರ ಸರ್ಕಾರ್ ಅಕ್ಕಿ ವ್ಯಾಪಾರಿಯಾಗಿದ್ದು, ಬೋಗರ್ ಬಜಾರ್ನಲ್ಲಿ "ಭಾಯ್ ಭಾಯ್ ಎಂಟರ್ಪ್ರೈಸ್" ಅನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಸುಮಾರು 11 ಗಂಟೆ ವೇಳೆ ಮಾರುಕಟ್ಟೆ ಪ್ರದೇಶದಲ್ಲಿ ಅಪರಿಚಿತ ದಾಳಿಕೋರರು ಹರಿತವಾದ ಆಯುಧಗಳಿಂದ ಹೊಡೆದು ಕೊಂದು ಶವವನ್ನು ಅಂಗಡಿಯೊಳಗೆ ಬಿಟ್ಟು ಬಾಗಿಲು ಹಾಕಿ ಮುಚ್ಚಿದ್ದಾರೆ. ಅಲ್ಲದೆ ಅಂಗಡಿಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದು ಪರಾರಿಯಾಗಿದ್ದಾರೆ.
ತಡರಾತ್ರಿಯಾದರೂ ಸರ್ಕಾರ ಮನೆಗೆ ಬಾರದ ಹಿನ್ನಲೆಯಲ್ಲಿ ಅವರನ್ನು ಹುಡುಕುತ್ತ ಅಂಗಡಿಗೆ ಬಂದ ಕುಟುಂಬಸ್ಥರು ಅಂಗಡಿಯಲ್ಲಿ ರಕ್ತದ ಮಡುವಿನಲ್ಲಿ ಸರ್ಕಾರ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರ ದೇಹವನ್ನು ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ರ ಸುಜನ್ ಸರ್ಕಾರ್, ತಂದೆಯ ಕೊಲೆ ಬಳಿಕ ಕೊಲೆಗಾರರು ಅಂಗಡಿಯಲ್ಲಿ ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ನಮಗೆ ಬಹಳ ದಿನಗಳಿಂದ ಅಕ್ಕಿ ವ್ಯಾಪಾರವಿದೆ.
ಯಾರಿಗೂ ನಮ್ಮೊಂದಿಗೆ ಯಾವುದೇ ದ್ವೇಷವಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಹಂತಕರನ್ನು ಹಿಡಿದ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಗಳ ವಿರುದ್ಧ ಹಿಂಸಾಚಾರ
ಇನ್ನು ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು ಪ್ರಮುಖವಾಗಿ ಹಿಂದೂಗಳ ಮೇಲಿನ ಹಿಂಸಾಚಾರ ವ್ಯಾಪಕವಾಗಿದೆ.
ಇದೇ ಗುರುವಾರ ರಾಷ್ಟ್ರೀಯ ಚುನಾವಣೆಗೆ ಬಾಂಗ್ಲಾದೇಶ ಸಿದ್ಧತೆ ನಡೆಸಿರುವಂತೆಯೇ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಆಡಳಿತದಲ್ಲಿ ದೇಶದ ಹಿಂದೂ ಅಲ್ಪಸಂಖ್ಯಾತರ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಆಗಸ್ಟ್ 2024 ರಿಂದ ಬಾಂಗ್ಲಾದೇಶವು ಅಲ್ಪಸಂಖ್ಯಾತರ ಮೇಲೆ ಸಾವಿರಾರು ದಾಳಿಗಳನ್ನು ಕಂಡಿದೆ, ಇದರಲ್ಲಿ ಕೊಲೆಗಳು, ಬೆಂಕಿ ಹಚ್ಚುವಿಕೆ, ದೇವಾಲಯ ಅಪವಿತ್ರಗೊಳಿಸುವಿಕೆ ಮತ್ತು ಭೂ ಕಬಳಿಕೆಗಳು ಸೇರಿವೆ.
Advertisement