

ಢಾಕಾ: ಇತ್ತೀಚಿಗೆ ನಡೆದ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿದ ಬಾಂಗ್ಲಾದೇಶ ನ್ಯಾಷಲಿಸ್ಟ್ ಪಾರ್ಟಿಯ ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಮಂಗಳವಾರ ಪದ ಗ್ರಹಣ ಮಾಡಿದ್ದಾರೆ.
ಈ ನಡುವೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಿರ್ಗಮಿತ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಮಾಡಿರುವ ಭಾರತದ ಸಪ್ತ ಸಹೋದರಿಯರು ಎಂದು ಕರೆಯಲಾಗುವ ಈಶಾನ್ಯ ರಾಜ್ಯಗಳ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ.
ಬಾಂಗ್ಲಾದೇಶದ ಕಡಲ ಪ್ರದೇಶವನ್ನು ನೇಪಾಳ, ಭೂತಾನ್ ಸೇರಿದಂತೆ ಏಳು ಈಶಾನ್ಯ ರಾಜ್ಯಗಳೊಂದಿಗೆ ಜೋಡಿಸಲು ಪ್ರಯತ್ನಿಸುವ ಉಪ ಪ್ರಾದೇಶಿಕ ಆರ್ಥಿಕ ಚೌಕಟ್ಟನ್ನು ಯೂನಸ್ ವಿವರಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದೆಗೆಟ್ಟಿರುವ ಬೆನ್ನಲ್ಲೇ ಯೂನಸ್ ನೀಡಿರುವ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಮ್ಮ ಕರಾವಳಿ ಪ್ರದೇಶವು ಭೌಗೋಳಿಕ ಗಡಿ ಮಾತ್ರವಲ್ಲದೇ, ಇದು ಬಾಂಗ್ಲಾದೇಶಕ್ಕೆ ವಿಶ್ವ ಆರ್ಥಿಕತೆಯೊಂದಿಗೆ ತೊಡಗಿಸಿಕೊಳ್ಳಲು ತೆರೆದ ಬಾಗಿಲು. ನೇಪಾಳ, ಭೂತಾನ್ ಸೇರಿದಂತೆ ಏಳು ರಾಜ್ಯಗಳ ಜೊತೆಗೆ ಈ ಪ್ರದೇಶವು ಉತ್ತಮ ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ಯೂನಸ್ ಅವರು ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಈಶಾನ್ಯ ರಾಜ್ಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ಹಿಂದೆ 2025ರಲ್ಲಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೂನಸ್ ಅವರು ಮೊದಲ ಬಾರಿಗೆ ಏಳು ಈಶಾನ್ಯ ರಾಜ್ಯಗಳ ವಿಷಯವನ್ನು ಎತ್ತಿದ್ದರು. ಭಾರತದ ಏಳು ಸಹೋದರಿಯರು ಎಂದು ಕರೆಯಲಾಗುವ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ. ನಾವೇ ಸಮುದ್ರದ ಮೇಲೆ ನಿಯಂತ್ರಣ ಹೊಂದಿದ್ದೇವೆ ಎಂಬ ಹೇಳಿಕೆಯನ್ನು ಭಾರತದ ರಾಜಕೀಯ ನಾಯಕರು ಪಕ್ಷಾತೀತವಾಗಿ ಖಂಡಿಸಿದ್ದರು.
Advertisement