

ನವದೆಹಲಿ: ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಪ್ರಕರಣ ಇದೀಗ ಗ್ಯಾಂಗ್ಸ್ಟರ್ಗಳು ಮತ್ತು ಉಗ್ರರ ನಡುವಿನ ಭೀಕರ ಗ್ಯಾಂಗ್ವಾರ್ಗೆ ಕಾರಣವಾಗುವ ಮುನ್ಸೂಚನೆ ನೀಡಿದೆ.
ಬ್ರಿಟನ್ ಮೂಲದ ನಿಷೇಧಿತ ಖಲಿಸ್ತಾನಿ ಉಗ್ರ ಪರಮಜಿತ್ ಸಿಂಗ್ ಪಮ್ಮಾ, ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ಗೆ ಬಹಿರಂಗವಾಗಿಯೇ ಕೊಲೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಆಡಿಯೋದಲ್ಲಿ "ನಿಜ್ಜರ್ನ ಕೊಲ್ಲುವ ಮೂಲಕ ನೀನು ನಿನ್ನ ಸ್ವಂತ ಸಾವಿನ ವಾರೆಂಟ್ಗೆ ಸಹಿ ಹಾಕಿಕೊಂಡಿದ್ದೀಯಾ" ಎಂದು ಎಚ್ಚರಿಕೆ ನೀಡಿರುವುದು ಕಂಡು ಬಂದಿದೆ.
ಸೋಮವಾರ ವೈರಲ್ ಆಗಿರುವ ಸುಮಾರು 15 ನಿಮಿಷಗಳ ಈ ಆಡಿಯೋದಲ್ಲಿ, 2023ರ ಜೂನ್ನಲ್ಲಿ ನಡೆದ ನಿಜ್ಜರ್ ಹತ್ಯೆಯ ಹೊಣೆಯನ್ನು ‘ಮೂರೂವರೆ ವರ್ಷ’ಗಳ ಬಳಿಕ ಒಪ್ಪಿಕೊಳ್ಳುವ ಬ್ರಾರ್ ನಿರ್ಧಾರವನ್ನು ಪಮ್ಮಾ ಪ್ರಶ್ನಿಸಿದ್ದಾನೆ. ಭಾರತ ಸರ್ಕಾರ ತನ್ನನ್ನು ರಕ್ಷಿಸಲಿದೆ ಎಂಬ ಭ್ರಮೆಯಲ್ಲಿ ಇರಬಾರದು ಎಂದೂ ಎಚ್ಚರಿಸಿದ್ದಾನೆ.
ಗೌರವಾನ್ವಿತ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೊಲ್ಲುವ ಮೂಲಕ ನೀನು ಮತ್ತು ನಿನ್ನ ಗ್ಯಾಂಗ್ ನಿಮ್ಮದೇ ಮರಣದಂಡನೆಗೆ ಸಹಿ ಹಾಕಿದ್ದೀರಿ. ನೀವು ಹಿಂದಿರುಗಲು ಸಾಧ್ಯವಿಲ್ಲದ ಗೆರೆಯನ್ನು ದಾಟಿದ್ದೀರಿ” ಎಂದು ಪಮ್ಮಾ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ.
“ಪ್ರಕೃತಿಯ ನಿಯಮ ಬಹಳ ಸ್ಪಷ್ಟವಾಗಿದೆ. ರಕ್ತ ಮಾತನಾಡುತ್ತದೆ. ನಿಜ್ಜರ್ನ ರಕ್ತವೂ ಮಾತನಾಡಲಿದೆ” ಎಂದು ಹೇಳಿರುವ ಪಮ್ಮಾ, ಬ್ರಾರ್ ಗ್ಯಾಂಗ್ ನಡೆಸಿದ ಎನ್ನಲಾದ 40 ಗುಂಡಿನ ದಾಳಿಗೆ ಪ್ರತಿಯಾಗಿ 4,000 ಗುಂಡುಗಳನ್ನು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ. “ಅದನ್ನು ಮಾಡಲು ನಾವು ಸಮರ್ಥರು ಎಂಬುದು ನಿನಗೆ ಗೊತ್ತಿದೆ” ಎಂದೂ ಹೇಳಿದ್ದಾನೆ.
ಬ್ರಾರ್ ತಮ್ಮ ಫೋನ್ ಸಂಭಾಷಣೆಯನ್ನು ಸೋರಿಕೆ ಮಾಡಿ, ನಿಜ್ಜರ್ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸುವ ಮೂಲಕ ಆತನಿಗೆ ಕಳಂಕ ತರಲು ಪ್ರಯತ್ನಿಸಿದ್ದಾನೆ ಎಂದು ಪಮ್ಮಾ ಆರೋಪಿಸಿದ್ದಾನೆ.
ಈ ಹಿಂದೆ ಸೋರಿಕೆಯಾದ ಆಡಿಯೋದಲ್ಲಿ ಬ್ರಾರ್, ನಿಜ್ಜರ್ ತನ್ನ ಪ್ರತಿಸ್ಪರ್ಧಿ ಅರ್ಷ್ ದಲ್ಲಾ ಗ್ಯಾಂಗ್ಗೆ ಬೆಂಬಲ ನೀಡಿದ್ದ ಹಾಗೂ ಅಪ್ರಾಪ್ತರನ್ನು ಒಳಗೊಂಡ ಮಾದಕವಸ್ತು ವ್ಯವಹಾರದಲ್ಲಿ ತೊಡಗಿದ್ದ ಎಂದು ಆರೋಪಿಸಿದ್ದ.
ಪಮ್ಮಾ, ನಿಜ್ಜರ್ಗೆ ‘ಬೆನ್ನಿಗೆ ಚೂರಿ ಹಾಕಿದ್ದೀಯ’ ಎಂದು ಬ್ರಾರ್ ವಿರುದ್ಧ ಆರೋಪಿಸಿ, ಆತನನ್ನು ‘ದಿನಗೂಲಿ ಗ್ಯಾಂಗ್ಸ್ಟರ್’ ಎಂದು ಕರೆದಿದ್ದಾನೆ. ನಿಜ್ಜರ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾನೆ ಎಂದು ಟೀಕಿಸಿದ್ದಾನೆ.
ಆಡಿಯೋ ಸೋರಿಕೆಯಾದ ಬಳಿಕ ಒಂದು ವರ್ಷದೊಳಗೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶಗಳು ಬಂದಿವೆ ಎಂದು ಪಮ್ಮಾ ಹೇಳಿದ್ದಾನೆ. “ಒಂದು ವರ್ಷವನ್ನು ಬಿಡಿ... 366 ದಿನಗಳ ಕಾಲ ನೋಡೋಣ, ಯಾರು ಕೊಲೆಯಾಗುತ್ತಾರೆ ಎಂದು” ಎಂದು ಆತ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ. ಕಳೆದ 12 ವರ್ಷಗಳಲ್ಲಿ ತನ್ನನ್ನು ಹತ್ಯೆ ಮಾಡಲು ಹಲವು ವಿಫಲ ಪ್ರಯತ್ನಗಳು ನಡೆದಿವೆ ಎಂದೂ ಆತ ಹೇಳಿಕೊಂಡಿದ್ದಾನೆ.
ಲಾರೆನ್ಸ್ ಬಿಷ್ಣೋಯ್ ಜೊತೆಗಿನ ತನ್ನ ಭಿನ್ನಾಭಿಪ್ರಾಯ ಕೇವಲ ಆಂತರಿಕ ವಿಚಾರ ಎಂಬ ಬ್ರಾರ್ ಹೇಳಿಕೆಯನ್ನು ಪಮ್ಮಾ ತಳ್ಳಿಹಾಕಿದ್ದಾನೆ. ಅದು ‘ನಿಮ್ಮ ಯಜಮಾನರನ್ನು ರಕ್ಷಿಸಲು’ ನೀಡಿರುವ ನೆಪ ಎಂದು ಆರೋಪಿಸಿದ್ದಾನೆ.
ನಿಜ್ಜರ್ ಮೇಲೆ ನಿಗಾ ಇಡುವ ಕಾರ್ಯವನ್ನು ಮಾಜಿ ಭಾರತೀಯ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ ನಡೆಸಿದ್ದರು ಎಂದು ಆರೋಪಿಸಿ ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣವನ್ನೂ ಪಮ್ಮಾ ಉಲ್ಲೇಖಿಸಿದ್ದಾನೆ.
ಇದೇ ವೇಳೆ ನಿಜ್ಜರ್ನನ್ನು ‘ಹುತಾತ್ಮ’ ಎಂದು ಕರೆದಿರುವ ಪಮ್ಮಾ, ಆತನನ್ನು ಕೊಂದು ಬಳಿಕ ಅಪಪ್ರಚಾರ ಮಾಡುವ ಮೂಲಕ ಬ್ರಾರ್ ತನ್ನದೇ ಕುಟುಂಬದ ಹೆಸರಿಗೆ ಕಳಂಕ ತಂದಿದ್ದಾನೆ ಎಂದು ಆರೋಪಿಸಿದ್ದಾನೆ.
ಕಾರುಗಳು ಅಥವಾ ಕಿಟಕಿಗಳ ಮೇಲೆ ದಾಳಿ ನಡೆಸಲು ಇತರರನ್ನು ಕಳುಹಿಸುವ ಬದಲು ನೇರವಾಗಿ ತನ್ನನ್ನು ಎದುರಿಸುವಂತೆ ಬ್ರಾರ್ಗೆ ಸವಾಲು ಹಾಕಿದ್ದಾನೆ.
ಇದೇ ವೇಳೆ ಗೋಲ್ಡಿ ಬ್ರಾರ್ನನ್ನು 'ದಿನಗೂಲಿ ಗ್ಯಾಂಗ್ಸ್ಟರ್' ಎಂದು ಕರೆದಿರುವ ಪಮ್ಮಾ, ಅವನು ಜನರನ್ನು ಬೆದರಿಸಿ ಕೋಟಿಗಟ್ಟಲೆ ಹಣ ಬೇಡಿಕೆ ಇಡುತ್ತಾನೆ, ಆದರೆ, ಕೊನೆಗೆ ಕೇವಲ 2,000 ಡಾಲರ್ಗೆ ಸೆಟಲ್ಮೆಂಟ್ ಮಾಡಿಕೊಳ್ಳುತ್ತಾನೆ ಎಂದು ಲೇವಡಿ ಮಾಡಿದ್ದಾನೆ.